ಮುಳ್ಳೇರಿಯ: ಪ್ಲಸ್ವನ್ ತರಗತಿಗಳು ಆರಂಭಗೊಂಡ ಬೆನ್ನಲ್ಲೇ ಶಾಲೆಗಳಲ್ಲಿ ರ್ಯಾಗಿಂಗ್ ಪಿಡುಗು ತೀವ್ರಗೊಂಡಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಹಾಗೂ ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ವನ್ ವಿದ್ಯಾರ್ಥಿ ಹಲ್ಲೆಯಿಂದ ಗಾಯಗೊಂಡ ಬೆನ್ನಲ್ಲೇ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ರ್ಯಾಗಿಂಗ್ ನಡೆದಿದೆ.
ಬೆಳಿಂಜ ನಿವಾಸಿಯೂ, ಬೆಳ್ಳೂರು ಶಾಲೆಯ ಪ್ಲಸ್ವನ್ ವಿದ್ಯಾರ್ಥಿಯಾದ 16ರ ಹರೆಯದ ಬಾಲಕನ ಮೇಲೆ ನಿನ್ನೆ ಬೆಳಿಗ್ಗೆ ರ್ಯಾಗಿಂಗ್ ನಡೆಸಲಾಗಿದೆ. ಅಂಗಿಯ ಮೇಲಿನ ಗುಬ್ಬಿ ಹಾಕಿಲ್ಲವೆಂದು ತಿಳಿಸಿ ನಾಲ್ವರು ಪ್ಲಸ್ಟು ವಿದ್ಯಾರ್ಥಿಗಳು ಸೇರಿ ಪ್ಲಸ್ವನ್ ವಿದ್ಯಾರ್ಥಿಗೆ ಹೊಡೆದು, ತುಳಿದು ಗಾಯಗೊಳಿಸಿದ್ದಾರೆ. ಹಲ್ಲೆಗೀಡಾದ ವಿದ್ಯಾರ್ಥಿಯನ್ನು ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಘಟನೆ ಬಗ್ಗೆ ಶಾಲಾ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಯ ಹೇಳಿಕೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಳೆದ ಮಂಗಳವಾರವೂ ಬೆಳ್ಳೂರು ಶಾಲೆಯ ಪ್ಲಸ್ವನ್ ಹಾಗೂ ಪ್ಲಸ್ಟು ವಿದ್ಯಾರ್ಥಿಗಳ ಮಧ್ಯೆ ಬಸ್ನೊಳಗೆ ಹೊಡೆದಾಟ ನಡೆದಿತ್ತು. ಬುಧವಾರ ಮತ್ತೆ ಘರ್ಷಣೆಗೆ ಸಾಧ್ಯತೆ ಇದೆಯೆಂದು ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ ಅಂದು ಪ್ಲಸ್ಟು ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು. ಸಮಸ್ಯೆಯ ಕುರಿತು ಸಮಾಲೋಚಿಸಲು ನಿನ್ನೆ ಪಿಟಿಎ ಸಭೆ ನಡೆಯಲಿರುವಂತೆಯೇ ಪ್ಲಸ್ವನ್ ವಿದ್ಯಾರ್ಥಿ ಮೇಲೆ ರ್ಯಾಗಿಂಗ್ ನಡೆಸಲಾಗಿದೆ.
ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ೧೧ ಗಂಟೆಗೆ ಹಲ್ಲೆಗೊಳಗಾದ ಪ್ಲಸ್ವನ್ ವಿದ್ಯಾರ್ಥಿಯ ದೂರಿನಂತೆ ಪ್ಲಸ್ಟು ವಿದ್ಯಾರ್ಥಿಗಳಾದ ೨೦ ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ದೂರುಗಾರನಾದ ವಿದ್ಯಾರ್ಥಿಯನ್ನು ತಡೆದು ನಿಲ್ಲಿಸಿ ಕೈಹಿಡಿದು ತಿರುಗಿಸಿರುವುದಾಗಿಯೂ ಬಳಿಕ ದೂಡಿಹಾಕಿ ಮೆಟ್ಟಿ ಗಾಯಗೊಳಿಸಿರುವುದಾಗಿ ಪ್ರಕರಣ ದಾಖಲಿಸಲಾಗಿದೆ.
ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿಯಾದ ವಳಯಂ ನಿವಾಸಿ ಮೊನ್ನೆ ಸಂಜೆ ಹಲ್ಲೆಗೀಡಾಗಿದ್ದಾನೆ. ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯನ್ನು ಹಿಂಭಾಲಿಸಿ ಬಂದ ೧೦ನೇ ತರಗತಿ ವಿದ್ಯಾರ್ಥಿಗಳು ಕೀಲಿಕೈಯಿಂದ ಇರಿದು ಹಲ್ಲೆಗೈದಿರುವುದಾಗಿ ದೂರಲಾಗಿದೆ. ತರಗತಿ ನಡೆಯುವ ಹೊತ್ತಿನಲ್ಲಿ ಹೊರಗೆ ಬರುವಂತೆ ತಿಳಿಸಿದ್ದರೂ ಅದಕ್ಕೆ ಸಿದ್ಧವಾಗದ ದ್ವೇಷದಿಂದ ವಿದ್ಯಾರ್ಥಿಗೆ ಹಲ್ಲೆಗೈದಿರುವುದಾಗಿ ಹೇಳಲಾಗುತ್ತಿದೆ.





