ಕಾಸರಗೋಡು: ಖಾಸಗಿ ಸಂಸ್ಥೆಗೆ ನೀಡಿದ ಒಂದು ಕೋಟಿ ರೂ.ವನ್ನು ಹಿಂತಿರುಗಿಸದ ಬಗ್ಗೆ ಪೊಲೀಸರಿಗೆ ದೂರು ನೀಡಿದ ಯುವಕ ಮತ್ತು ಆತನ ಸಂಬಂಧಿಕನನ್ನು ಅಪಹರಿಸಿ ಹಲ್ಲೆ ನಡೆಸಿದ ಸುಫಾರಿ ತಂಡಕ್ಕೆ ಸೇರಿದ ಕಾಸರಗೋಡು ನಿವಾಸಿಯನ್ನು ಕಣ್ಣೂರು ಟೌನ್ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿ ಅಬೂಬಕರ್ ಸಿದ್ದಿಕ್ (36) ಬಂಧಿತ ಆರೋಪಿ. ಕಣ್ಣೂರು ಪಳ್ಳಿಪ್ರಂ ಆದಿರಗಂ ನಿವಾಸಿ ಪಿ. ರಿಯಾಸ್ (42) ಮತ್ತು ಅವರ ಸಂಬಂಧಿನೋರ್ವನನ್ನು ಕಳೆದ ಎಪ್ರಿಲ್ 19ರಂದು ಕಾರಿನಲ್ಲಿ ಅಪಹರಿಸಿ ಮಂಗಳೂರಿನ ಅತ್ತಾವರಕ್ಕೆ ತಲುಪಿಸಿ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿ ನಂತರ ಖಾಸಗಿ ಆಸತ್ರೆಗೆ ಸಾಗಿಸಿ ಅಲ್ಲಿಂದ ಪರಾರಿ ಯಾದ ಸುಫಾರಿ ತಂಡದಲ್ಲಿ ಬಂಧಿತ ಸಿದ್ದಿಕ್ ಒಳಗೊಂಡಿದ್ದಾನೆನ್ನಲಾಗಿದೆ.
ದೂರುಗಾರ ರಿಯಾಸ್ ಖಾಸಗಿ ಸಂಸ್ಥೆಯಲ್ಲಿ ಈ ಹಿಂದೆ ಒಂದು ಕೋಟಿ ರೂ. ಹೂಡಿಕೆ ನಡೆಸಿದ್ದರು. ಬಳಿಕ ಆ ಹಣವನ್ನು ಹಿಂತಿರುಗಿ ಸುವಂತೆ ಆಗ್ರಹಪಟ್ಟಿದ್ದರು.ಆದರೆ ಅದನ್ನು ಸಂಸ್ಥೆ ಹಿಂತಿರುಗಿಸದ ಬಗ್ಗೆ ರಿಯಾಸ್ ಕಣ್ಣೂರು ಟೌನ್ ಪೊಲೀಸರಿಗೆ ದೂರು ನೀಡಿದ್ದರು. ಆ ದೂರನ್ನು ಹಿಂತೆಗೆದುಕೊಳ್ಳಬೇಕೆಂದು ಬೆದರಿಕೆಯೊಡ್ಡಿ ಸುಫಾರಿ ತಂಡ ತನ್ನನ್ನು ಮತ್ತು ಸಂಬಂಧಿಕರನ್ನು ಕಾರಿನಲ್ಲಿ ಅಪಹರಿಸಿತ್ತೆಂದು ರಿಯಾಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಅದಕ್ಕೆ ಸಂಬಂಧಿಸಿ ಪೊಲೀಸರು ಸುಫಾರಿ ತಂಡದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಬಳಿಕ ಸಿದ್ಕಿಕ್ನನ್ನು ಬಂಧಿಸಲಾಗಿದೆ. ಅಜ್ಮಲ್, ಶಾನು ಸಮೀರ್, ನೂರ್ಶಾ ಎಂಬವರ ನೇತೃತ್ವದಲ್ಲಿ 20 ಮಂದಿ ಒಳಗೊಂಡ ಸುಪಾರಿ ತಂಡ ನನ್ನನ್ನು ಅಪಹರಿಸಿ ಹಲ್ಲೆ ನಡೆಸಿತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಿಯಾಸ್ ಆರೋಪಿಸಿದ್ದಾರೆ.





