ಕುಂಬಳೆ: ಕರ್ನಾಟಕ ಭಾಗದಿಂದ ಕಾಸರಗೋಡಿನತ್ತ ಕೇರಳದಲ್ಲಿ ನಿಷೇಧ ಹೇರಲಾದ ತಂಬಾಕು ಉತ್ಪನ್ನಗಳ ಸಾಗಾಟ ಮತ್ತೆ ವ್ಯಾಪಕಗೊಂಡಿದೆ.
ನಿನ್ನೆ ಕರ್ನಾಟಕದಿಂದ ಕಾಸರಗೋಡಿನತ್ತ ಟೊಯೊಟಾ ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಪಾನ್ ಮಸಾಲೆ ವಶಪಡಿಸಲಾಗಿದೆ. ಕಾರಿನೊಳಗೆ ೧೮ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ೩೧೪೮೮ ಪ್ಯಾಕೆಟ್ ಪಾನ್ ಮಸಾಲೆ ಪತ್ತೆಯಾಗಿದೆ. ಈ ಸಂಬಂಧ ಕಾರಿನಲ್ಲಿದ್ದ ಕಾಸರಗೋಡು ಮುಟ್ಟತ್ತೋಡಿ ಹಿದಾಯತ್ ನಗರ ನಿವಾಸಿ ಅಬೂಬಕರ್ ಸಿದ್ದಿಕ್ (೩೩) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನೊಳಗಿದ್ದ ೩೦ ಸಾವಿರ ರೂಪಾಯಿಗಳನ್ನು ಪೊಲೀ ಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಕುಂಬಳೆ ಎಸ್ಐ ಉಮೇಶ್ ನೇತೃತ್ವದ ತಂಡ ನಿನ್ನೆ ಸಂಜೆ ಕುಂಬಳೆ ಜಿಎಚ್ಎಸ್ಎಸ್ ರಸ್ತೆಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಪಾನ್ ಮಸಾಲೆ ಸಾಗಾಟ ಪತ್ತೆಯಾಗಿದೆ. ಪೊಲೀಸರು ಕಾರ್ಯಾಚರಣೆ ನಿರತರಾಗಿದ್ದ ವೇಳೆ ಆಗಮಿಸಿದ ಟೊಯೋಟಾ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಪಾನ್ ಮಸಾಲೆ ಪತ್ತೆಯಾಗಿದೆ.