ಪ್ರತಾಪನಗರ ಮನೆ ಕಳವು: 4 ಬೆರಳಚ್ಚು ಪತ್ತೆ: ಕಳ್ಳರಿಗಾಗಿ ತೀವ್ರ ಶೋಧ

ಕುಂಬಳೆ: ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಗಲ್ಫ್ ಉದ್ಯೋಗಿಯಾದ ಬದ್ರುಲ್ ಮುನೀರ್‌ರ ಮನೆಯಲ್ಲಿ ನಡೆದ ಕಳವು ಸಂಬಂಧ ನಡೆಸಿದ ತನಿಖೆ ವೇಳೆ ನಾಲ್ಕು ಬೆರಳಚ್ಚುಗಳು ಪತ್ತೆಯಾಗಿವೆ. ಅವುಗಳ ಆಧಾರದಲ್ಲಿ ಕಳ್ಳರ ಕುರಿತಾಗಿ ಶೋಧ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ತನಿಖೆಗಾಗಿ ಪೊಲೀಸರ ಪ್ರತ್ಯೇಕ ತಂಡವನ್ನು ನೇಮಿಸಲಾಗುವುದು. ಸಮೀಪದ ಇನ್ನೂ ಹಲವು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಕಳ್ಳರ ಕುರಿತಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ರಾತ್ರಿ ೭ ಗಂಟೆ ವೇಳೆ ಮನೆಗೆ ಕಳ್ಳರು ನುಗ್ಗಿದ್ದರು. ಕುಟುಂಬ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ೪ ಪವನ್ ಚಿನ್ನಾಭರಣ ಹಾಗೂ ೩೫ ಸಾವಿರ ರೂಪಾಯಿ ಕಳವು ನಡೆಸಿದ್ದಾರೆ. ಇದೇ ವೇಳೆ ಮನೆಗೆ ಕಳ್ಳರು ನುಗ್ಗಿದ ವಿಷಯ ತಿಳಿದು ಅಲ್ಲಿಗೆ ತಲುಪಿದ ಮನೆ ಮಾಲಕ ಬದ್ರುಲ್ ಮುನೀರ್‌ರ ಪತ್ನಿ ಖದೀಜ ರೆಹ್ನಾಸ್‌ರ ಸಹೋದರ ಮೊಹಮ್ಮದ್ ರಮೀಸ್‌ಗೆ ಕಳ್ಳರು ಹಲ್ಲೆಗೈದು ಕೋವಿ ತೋರಿಸಿ ಬೆದರಿಕೆಯೊಡ್ಡಿ ಎರಡು ಬೈಕ್‌ಗಳಲ್ಲಿ ಪರಾರಿಯಾಗಿದ್ದರು. ಕಳವು ತಂಡದಲ್ಲಿ ಒಟ್ಟು ಆರು ಮಂದಿಯಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.

Leave a Reply

Your email address will not be published. Required fields are marked *

You cannot copy content of this page