ಕೋಟ್ಟಯಂ: ಇಡೀ ದೇಶದ ಗಮನಸೆಳೆದಿರುವ ಶಬರಿಮಲೆ ದೇಗುಲ ದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ಆರೋಪಿಗಳಲ್ಲೋರ್ವ ರಾದ ತಿರುವಿ ದಾಂಕೂರು ಮುಜರಾಯಿ ಮಂಡಳಿಯ ಮಾಜಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಮುರಾರಿಬಾಬು (54) ನಿನ್ನೆ ರಾತ್ರಿ 12.45ರ ವೇಳೆಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಅರ್ಬುದ ರೋಗದಿಂದ ಬಳಲುತ್ತಿದ್ದ ಇವರು ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತದೇಹದ ಅಂತ್ಯಕ್ರಿಯೆ ಇಂದು ಸಂಜೆ ಹುಟ್ಟೂರಾದ ಪೆರುಕುನ್ನಿನಲ್ಲಿರುವ ಮನೆಹಿತ್ತಿಲಲ್ಲಿ ನಡೆಯಲಿದೆ.
ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕಣದಲ್ಲಿ ಆರೋಪಿ ಯಾಗಿರುವ ಮುರಾರಿಬಾಬು ಆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಬಳಿಕ 90 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿದ್ದರು. ಈ ಅವಧಿಯೊಳಗೆ ಅವರ ವಿರುದ್ಧ ತನಿಖಾ ತಂಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ಸಹಜ ಜಾಮೀನು ಮಂಜೂರು ಮಾಡಿತ್ತು.
ಕೋಟ್ಟಯಂ ಚೆಂಗನಾಶ್ಶೇರಿ ನಿವಾಸಿಯಾಗಿರುವ ಮುರಾರಿಬಾಬು ಈ ಹಿಂದೆ ಪೊಲೀಸ್ ಆಗಿ ಸೇವೆ ಸಲ್ಲಿಸಿದ್ದರು. ನಂತರ 1994ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಿಸಲ್ಪಟ್ಟ ಅವರು ಕಣ್ಣೂರಿನಲ್ಲಿ ಪೊಲೀಸ್ ತರಬೇತಿ ಪಡೆದಿದ್ದರು. ಆದರೆ ತರಬೇತಿ ಪೂರ್ತೀಕರಿಸದೆ ಅವರು 1997ರಲ್ಲಿ ತಿರುವಿದಾಂಕೂರು ಮುಜರಾಯಿ ಮಂಡಳಿಯ ಸಿಬ್ಬಂದಿಯಾಗಿ ಸೇರ್ಪಡೆಗೊಂಡಿದ್ದರು. ನಂತರ ಉದ್ಯೋಗದಲ್ಲ್ಲಿ ಭಡ್ತಿ ಲಭಿಸಿದ ಅವರು ಬಳಿಕ ಮುಜರಾಯಿ ಮಂಡಳಿಯ ಆಡಳಿತಾಧಿಕಾರಿಯಾಗಿ ಭಡ್ತಿಗೊಂಡಿದ್ದರು.







