ಬೋವಿಕಾನ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ಬೆಂಕಿ ತಗಲಿ ಅದು ಹೆಚ್ಚುಕಡಿಮೆ ಪೂರ್ಣವಾಗಿ ಭಸ್ಮಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಮುಳಿಯಾರು ಪಂಚಾಯತ್ನ ಅಲೂರು ಮೈಕುಳಿ ನಿವಾಸಿ ಹನೀಫಾ (47) ಎಂಬವರ ಮನೆಗೆ ಈ ರೀತಿ ಬೆಂಕಿ ತಗಲಿದೆ. ಘಟನೆ ವೇಳೆ ಹನೀಫ ಮನೆಯಲ್ಲಿರಲಿಲ್ಲ. ಮನೆಗೆ ಬೆಂಕಿ ತಗಲಿರುವುದನ್ನು ಗಮನಿಸಿದ ನೆರೆಮನೆಯವರು ನೀಡಿದ ಮಾಹಿತಿಯಂತೆ ಗ್ರೇಡ್ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಉಮೇಶನ್, ಗ್ರೇಡ್ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ರಮೇಶರ ನೇತೃತ್ವದಲ್ಲಿ ಇತರ ಸಿಬ್ಬಂದಿಗಳಾದ ಗೋಪಾಲ್, ಜುಬಿಲ್, ಅರುಣ ಪಿ. ನಾಯರ್, ಶ್ರೀಜಿತ ಮತ್ತು ಹೋಮ್ ಗಾರ್ಡ್ ರಾಗೇಶ್ ಎಂಬ ವರನ್ನೊಳಗೊಂಡ ಕಾಸರಗೋಡು ಅಗ್ನಿಶಾಮಕ ದಳದವರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಮನೆಯೊಳಗಿದ್ದ ಸಾಮಗ್ರಿಗಳೆಲ್ಲವೂ ಬೆಂಕಿಗಾಹುತಿಯಾಗಿದೆ. ಬೆಂಕಿ ತಗಲಲು ಕಾರಣವೇನೆಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ.





