ತಿರುವನಂತಪುರ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ವಿ.ಡಿ. ಸತೀಶನ್ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ಇಂದು ಬೆಳಿಗ್ಗೆ ನಡೆದ ಬೃಹತ್ ಜನಸ್ತೋಮ ನೆರೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ರಿಗೆ ಪ್ರಮಾಣವಚನ ಬೋಧಿಸಿದರು.
ವಿ.ಡಿ.ಸತೀಶನ್ ಜೊತೆಗೆ ಅವರ ನೇತೃತ್ವದ ಸಚಿವ ಸಂಪುಟದ ೨೦ ಮಂದಿ ಸದಸ್ಯರು ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮುಸ್ಲಿಂ ಲೀಗ್ ನೇತಾರ ಪಿ.ಕೆ ಕುಂಞಾಲಿಕುಟ್ಟಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಸಚಿವ ಸಂಪುಟದ ಇತರ ಸದಸ್ಯರಾಗಿ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ.ಮುರಳೀಧರನ್, ಎ.ಪಿ. ಅನಿಲ್ ಕುಮಾರ್, ಪಿ.ಸಿ.ವಿಶ್ವನಾಥ್, ಬಿಂದು ಕೃಷ್ಣ, ಒಜಿಎಂ ಜೋನ್, ಎಂ. ಲಿಜು, ಟಿ. ಸಿದ್ದಿಕ್, ಕೆ.ಎ. ತುಳಸಿ, ಒ.ಜೆ. ಜನೀಶ್ (ಎಲ್ಲರೂ ಕಾಂಗ್ರೆಸ್), ಎನ್ ಶಂಸುದ್ದೀನ್, ಕೆ.ಎಂ. ಶಾಜಿ, ಪಿ.ಕೆ. ಬಶೀರ್, ವಿ.ಇ ಅಬ್ದುಲ್ ಗಫೂರ್ (ಮುಸ್ಲಿಂಲೀಗ್), ಕೇರಳ ಕಾಂಗ್ರೆಸ್ನ ಮೋನ್ಸ್ ಜೋಸೆಫ್, ಆರ್ಎಸ್ಪಿಯ ಶಿಬು ಬೇಬಿ ಜೋನ್, ಕೇರಳ ಕಾಂಗ್ರೆಸ್ ಜೇಕಬ್ನ ಅನೂಪ್ ಜೇಕಬ್ ಮತ್ತು ಸಿಎಂಪಿಯ ಸಿ.ಪಿ. ಜೋನ್ ಎಂಬವರೂ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಒಳಗೊಂಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕರ್ನಾಟಕ ಉಪಮುಖ್ಯಮಂತ್ರಿ ಡಿ. ಶಿವಕುಮಾರ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಯಾಂಕಾಗಾಂಧಿ, ತೆಲಂಗಾನ ಮುಖ್ಯಮಂತ್ರಿ ರೇವಂತ ರೆಡ್ಡಿ, ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ರಿಗೆ ಆಹ್ವಾನ ನೀಡಲಾಗಿತ್ತಾದರೂ ಅವರು ಭಾಗವಹಿಸಲಿಲ್ಲ.







