ಪುಣಿಂಚಿತ್ತಾಯ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ

ಬೆಳ್ಳೂರು: ಕಲೆ, ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡಿ ಅಮರರಾದ ಪುಂಡೂರು ದಾಮೋದರ ಪುಣಿಂಚಿತ್ತಾಯರ ಸ್ಮಾರಕ ಪ್ರತಿಷ್ಠಾನದ ನೇತೃತ್ವದಲ್ಲಿ ಸಾಹಿತ್ಯ, ಕಲೋಪಾಸಕ ರಾಮಚಂದ್ರ ಪುಣಿಂಚಿತ್ತಾಯರ ಪ್ರಥಮ ವಾರ್ಷಿಕ ಸಂಸ್ಮರಣೆಯೊಂದಿಗೆ ನಾಡಿನ ಹಿರಿಯ ಕವಿ, ಅರ್ಥದಾರಿ ಡಾ| ರಮಾನಂದ ಬನಾರಿ ದಂಪತಿಗೆ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುಂಡೂರು ನೀರ್ಮಜೆಯಲ್ಲಿ ನಡೆದ ಸಮಾರಂಭವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ, ದಿ. ರಾಮಚಂದ್ರ ಪುಣಿಂಚಿತ್ತಾಯ ರಚಿಸಿದ ಭಕ್ತಿಭಾವಯಾನ ಎಂಬ ಭಕ್ತಿಗೀತೆಗಳ ಕೃತಿ ಬಿಡುಗಡೆಗೈದು ಆಶೀರ್ವಚನವಿತ್ತರು. ತಂತ್ರಿ ಉಳಿಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದರು. ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಕೃತಿ ಪರಿಚಯ ಮಾಡಿದರು. ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಶುಭಾಶಂಸನೆಗೈದರು ಇದೇ ಸಂದರ್ಭದಲ್ಲಿ  ಪ್ರತಿಷ್ಠಾನದ ಹಿರಿಯ ಸದಸ್ಯ ಶ್ರೀಪತಿ ಟಿ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಪುರುಷೋತ್ತಮ ಪುಣಿಂಚಿತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗುರುರಂಜನ್ ಪುಣಿಂಚಿತ್ತಾಯ ಸನ್ಮಾನಪತ್ರ ವಾಚಿಸಿದರು. ಸತ್ಯಮೂರ್ತಿ ಮಂಗಲ್ಪಾಡಿ ನಿರೂಪಿಸಿದರು. ಸ್ನೇಹಲತಾ ಅಮ್ಮಣ್ಣಾಯ, ಸೌಮ್ಯ ಸರಸ್ವತಿ ಪ್ರಾರ್ಥನೆ ಹಾಡಿದರು. ವಾಮದೇವ ಪುಣಿಂಚಿತ್ತಾಯ ವಂದಿಸಿದರು. ಸಂಸ್ಮರಣೆಯಂಗವಾಗಿ ‘ಕರ್ಮಬಂಧ’ ತಾಳಮದ್ದಳೆ ಜರಗಿತು. ಅಥಗಾರಿಕೆಯಲ್ಲಿ ಡಾ. ಎಂ. ಪ್ರಭಾಕರ ಜೋಷಿ, ಡಾ. ರಮಾನಂದ ಬನಾರಿ, ಶ್ರೀಖರ ಭಟ್ ಮರಾಠೆ, ಭಾಗವತರಾಗಿ ದಿನೇಶ್ ಅಮ್ಮಣ್ಣಾಯ , ಹಿಮ್ಮೇಳದಲ್ಲಿ ಲಕ್ಷ್ಮೀಳ ಅಮ್ಮಣ್ಣಾಯ, ಅಡೂರು ಮೋಹನ ಸರಳಾಯ ಭಾಗವಹಿಸಿದರು.

You cannot copy contents of this page