ಮೊಹಮ್ಮದ್ ರಿಯಾಸ್ ಮೌಲವಿ ಕೊಲೆ ಪ್ರಕರಣ: ವಿಚಾರಣೆ ಫೆ. ೧೬ಕ್ಕೆ ಮುಂದೂಡಿಕೆ; ತೀರ್ಪು
ದಿನಾಂಕ ಅಂದೇ ಘೋಷಿಸುವ ಸಾಧ್ಯತೆ
ಕಾಸರಗೋಡು: ಜಿಲ್ಲೆಯನ್ನು ಭಾರೀ ಆತಂಕಕ್ಕೊಳಪಡಿಸಿದ್ದ, ಮೂಲತಃ ಕೊಡಗು ನಿವಾಸಿ ಕಾಸರಗೋಡು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೊಹಮ್ಮದ್ ರಿಯಾಸ್ (೨೮)ರನ್ನು ಕೊಲೆಗೈದ ಪ್ರಕರಣದ ವಿಚಾರಣೆಯನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಫೆಬ್ರವರಿ ೧೬ಕ್ಕೆ ಮುಂದೂಡಿದೆ.
ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳಿದ್ದು, ಅವರಿಂದ ತನಿಖಾ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿರುವ ಪುರಾವೆಗಳ ಕುರಿತಾದ ಶಂಕೆಗಳನ್ನು ದೂರೀಕರಿಸುವ ಸಲುವಾಗಿ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಮುಂದೂಡಿದೆ.
ಇಂತಹ ಪುರಾವೆಗಳ ಮೇಲಿನ ಶಂಕೆಗಳನ್ನು ದೂರೀಕರಿಸಲು ಅಗತ್ಯದ ದಾಖಲು ಪತ್ರಗಳನ್ನು ಫೆ. ೧೬ರಂದು ಹಾಜರುಪಡಿಸು ವಂತೆಯೂ ಪ್ರಕರಣದ ಬಗ್ಗೆ ಸರಕಾರದ ಪರವಾಗಿ ವಾದಿಸುತ್ತಿರುವ ಸ್ಪೆಷಲ್ ಪ್ರೋಸಿಕ್ಯೂಟರ್ಗೆ ನ್ಯಾಯಾಲಯ ನಿರ್ದೇಶ ನೀಡಿದೆ.
ಈ ಪ್ರಕರಣದ ತೀರ್ಪು ನೀಡುವ ದಿನಾಂಕವನ್ನು ಫೆ. ೧೬ರಂದೇ ನ್ಯಾಯಾಲಯ ಘೋಷಿಸುವ ಸಾಧ್ಯತೆ ಇದೆ ಎಂದು ಸ್ಪೆಷಲ್ ಪ್ರೋಸಿಕ್ಯೂಟರ್ ಟಿ. ಸಜಿತ್ ಹೇಳಿದ್ದಾರೆ.