ಕುಂಬಳೆಯಲ್ಲಿ ಟೋಲ್ಬೂತ್ ವಿರುದ್ಧ ಪ್ರತಿಭಟನೆ ತೀವ್ರ: ಸಂಸದ, ಶಾಸಕರ ನೇತೃತ್ವದಲ್ಲಿ ಕಾಮಗಾರಿಗೆ ತಡೆ ; ಇಂದು ರಾತ್ರಿ ಸರ್ವಪಕ್ಷಗಳಿಂದ ನೈಟ್ ಮಾರ್ಚ್
ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ನಿರ್ಮಾಣದ ವಿರುದ್ಧ ನಾಗರಿಕರು ಹಾಗೂ ವಿವಿಧ ಪಕ್ಷಗಳ ನೇತೃತ್ವದಲ್ಲಿ ಚಳವಳಿ ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕುಂಬಳ ಸೇತುವೆ ಹಾಗೂ ಆರಿಕ್ಕಾಡಿ ಕಡವತ್ ಮಧ್ಯೆ ಟೋಲ್ ಬೂತ್ ನಿರ್ಮಾಣ ಕೆಲಸ ನಡೆಯುತ್ತಿದೆ. ಅದರ ವಿರುದ್ಧ ಸರ್ವಪಕ್ಷಗಳಿಂದ ಹಾಗೂ ನಾಗರಿಕರಿಂದ ಪ್ರತಿಭಟನೆ ವ್ಯಕ್ತವಾದರೂ ಕೆಲಸ ಮುಂದುವರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ನೂರಾರು ಮಂದಿ ನಾಗರಿಕರು ಹಾಗೂ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಅಲ್ಲಿಗೆ ತಲುಪಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಎಕೆಎಂ ಅಶ್ರಫ್ ಮೊದಲಾದವರು ಸ್ಥಳಕ್ಕೆ ತಲುಪಿದ್ದರು. ಅವರು ತಲುಪುವ ಮೊದಲೇ ಅಲ್ಲಿ ನಾಗರಿಕರು ಸೇರಿದ್ದರು. ಬಳಿಕ ನಾಗರಿಕರು ಹಾಗೂ ಜನ ಪ್ರತಿನಿಧಿಗಳು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ ಪ್ರತಿಭಟನಾ ನಿರತರು ಟೋಲ್ ಬೂತ್ನ ಕಾಂಕ್ರೀಟ್ ಕಂಬಗಳನ್ನು ಸ್ಥಾಪಿಸಲು ತೋಡಿದ ಹೊಂಡಗಳನ್ನು ಮಣ್ಣು ಹಾಕಿ ಮುಚ್ಚಿದ್ದಾರೆ. ಜಿಲ್ಲಾ ಅಭಿವೃದ್ಧಿ ಸಮಿತಿ ಶನಿವಾಸ ಸಭೆ ಸೇರಿ ಟೋಲ್ಬೂತ್ ನಿರ್ಮಾಣ ನಿಲ್ಲಿಸಬೇಕೆಂದು ನಿರ್ದೇಶಿಸಿದ್ದರೂ ಅದನ್ನು ಧಿಕ್ಕರಿಸಿ ಕಾಮಗಾರಿ ನಡೆಸಿರುವುದು ಖಂಡನೀಯವೆಂದು ಸಂಸದ ತಿಳಿಸಿದರು. ಚಳವಳಿಯ ಮುಂದು ವರಿಕೆಯಾಗಿ ಇಂದು ರಾತ್ರಿ ಸರ್ವ ಪಕ್ಷಗಳ ನೇತೃತ್ವದಲ್ಲಿ ಕುಂಬಳೆಯಲ್ಲಿ ನೈಟ್ ಮಾರ್ಚ್ ನಡೆಯಲಿದೆ. ರಾತ್ರಿ 7 ಗಂಟೆಗೆ ಕುಂಬಳೆ ಪೇಟೆಯಿಂದ ಹೊರಡುವ ಮಾರ್ಚ್ ಟೋಲ್ ಬೂತ್ ನಿರ್ಮಾಣ ಸ್ಥಳವರೆಗೆ ನಡೆಯಲಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಇದೇ ವೇಳೆ ನಿನ್ನೆ ಜನಪ್ರತಿನಿಧಿಗಳ ಹಾಗೂ ನಾಗರಿಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ನೇತಾರರು ಭಾಗವಹಿಸ ದಿರುವುದು ಚರ್ಚೆಗೆಡೆಯಾಗಿದೆ.