ಕೇರಳ ವಿಕಸಿತ್ ಸಮಾವೇಶ ನಾಳೆ: ರಾಜೀವ್ ಚಂದ್ರಶೇಖರ್ ಉದ್ಘಾಟನೆ
ಕಾಸರಗೋಡು: ವಿಕಸಿತ್ ಕೇರಳ ಸಮಾವೇಷ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಆರ್.ಕೆ. ಮಾಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಈ ಬಗ್ಗೆ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಬಿಜೆಪಿ ಜಿಲ್ಲಾ ಪದಾಧಿಕಾರಿ ಗಳು ತಿಳಿಸಿದ್ದಾರೆ. ಅಂದು ಬೆಳಿಗ್ಗೆ ವಿಕಸಿತ್ ಕೇರಳ ಸಮಾವೇಶವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರ ಶೇಖರ್ ಉದ್ಘಾಟಿಸುವರು. ಬಿಜೆಪಿ ರಾಜ್ಯ ಹಾಗೂ ಜಿಲ್ಲಾ ನೇತಾರರೂ ಇದರಲ್ಲಿ ಭಾಗವಹಿಸಲಿದ್ದಾರೆ. ಪಂಚಾ ಯತ್ ಪ್ರಧಾನ ಕಾರ್ಯದರ್ಶಿಗಳು ಮತ್ತು ಅದಕ್ಕಿಂತ ಹೆಚ್ಚಿನವರು, ಸಕ್ರಿಯ ಸದಸ್ಯರು, 2015 ಮತ್ತು 20ರ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳಿಂದ ಚುನಾಯಿತರಾದ ಪ್ರತಿನಿಧಿಗಳು, 2020ರ ಚುನಾವಣೆಯಲ್ಲಿ ೨ನೇ ಸ್ಥಾನ ಪಡೆದ ಬಿಜೆಪಿ ಅಭ್ಯರ್ಥಿಗಳು, ವಿಶೇಷ ಆಹ್ವಾನಿತರು ಹಾಗೂ ಎನ್ಡಿಎ ಜಿಲ್ಲಾ ನೇತಾರರೂ ಇದರಲ್ಲಿ ಭಾಗವಹಿಸಲಿದ್ದಾರೆ.
ನರೇಂದ್ರ ಮೋದಿ ಸರಕಾರವು ಪ್ರಾರಂಭಿಸಿದ ಅನೇಕ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಕೇರಳದಲ್ಲಿ ಸರಿಯಾಗಿ ಜ್ಯಾರಿಗೆ ತರದೇ ಇರುವ ಪರಿಸ್ಥಿತಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧಿಸಲು ಸ್ಥಳೀಯ ಸ್ವ-ಸರಕಾರಿ ಸಂಸ್ಥೆಗಳು ಮತ್ತು ಶಾಸಕಾಂಗ ಸಭೆಯಲ್ಲಿ ಬಿಜೆಪಿಯ ಪ್ರಾತಿನಿಧ್ಯವನ್ನು ಹೆಚ್ಚಿಸು ವುದು ಅತ್ಯಗತ್ಯವಾಗಿದೆ. ಈ ಸಮಾ ವೇಶವು ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಿಗಿರುವ ಆರಂಭವನ್ನೂ ಸೂಚಿಸಲಿದೆ ಎಂದೂ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.
ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಆಯ್ಕೆಗೊಂಡ ಬಳಿಕ ಅವರು ರಾಜ್ಯವನ್ನು ಅಭಿವೃದ್ಧಿ ಹೊಂದಿದ ಕೇರಳ (ವಿಕಸಿತ್ ಕೇರಳ)ಆಗಿ ಪರಿವರ್ತಿಸುವ ದೃಷ್ಠಿಕೋನ ಮಂಡಿಸಿದರು. ಈ ಗುರಿಯನ್ನು ಸಾಧಿಸಲು ಅವರು ಕೇರಳದ ಎಲ್ಲಾ ೩೦ ಸಾಂಸ್ಥಿಕ ಜಿಲ್ಲೆಗಳಲ್ಲಿ ಪಕ್ಷದ ಪದಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ತಮ್ಮ ದೃಷ್ಠಿಕೋನ ಮತ್ತು ಅನುಷ್ಠಾನ ಯೋಜನೆಗಳನ್ನು ತಿಳಿಸುತ್ತಿದ್ದಾರೆ. ಅದರಂತೆ ನಾಳೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಮೊದಲಾದವರು ತಿಳಿಸಿದರು.