ಕೊಲ್ಲಂ ನಿವಾಸಿ ಹೆಸರಲ್ಲಿ ದಾಖಲುಪತ್ರ ಹಾಜರುಪಡಿಸಿ ಪಾಸ್ಪೋರ್ಟ್ ಪಡೆದ ಬಗ್ಗೆ ದೂರು: ಕಾಸರಗೋಡು ನಿವಾಸಿ ವಿರುದ್ದ ಕೇಸು
ಕಾಸರಗೋಡು: ಕೊಲ್ಲಂ ನಿವಾಸಿಯ ಹೆಸರಿನ ದಾಖಲುಪತ್ರ ಹಾಜರುಪಡಿಸಿ ಪಾಸ್ಪೋರ್ಟ್ ಸಂಪಾದಿಸಿದ ಆರೋಪದಂತೆ ಕಾಸರಗೋಡು ನಿವಾಸಿ ವಿರುದ್ದ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರ ಗೋಡು ಆನೆಬಾಗಿಲು ಅಮೈತಲ ಕ್ಕಲ್ ವಳಪ್ಪಿಲ್ ವಿನೋದ್ ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
ಕೊಲ್ಲಂನ ಕೊಲ್ಲಕ ಶೀಲಾ ಭವನದ ಸನೋಜ್ ಕುಮಾರ್ ಎಂಬ ವಿಳಾಸದ ದಾಖಲುಪತ್ರಗಳನ್ನು ಹಾಜರುಪಡಿಸಿ 2008 ಡಿಸೆಂಬರ್ ೫ರಂದು ತಿರುವನಂತಪುರ ವಲಯ ಪಾಸ್ಪೋರ್ಟ್ ಕಚೇರಿಯಿಂದ ಪಾಸ್ ಪೋರ್ಟ್ ಪಡೆದ ಆರೋಪದಂತೆ ವಿನೋದ್ ವಿರುದ್ಧ ಈ ಕೇಸು ದಾಖಲಿಸಲಾಗಿದೆ. ಇನ್ನು 2012ರಲ್ಲಿ ವಿನೋದ್ ತನ್ನ ಸ್ವಂತ ವಿಳಾಸದಲ್ಲಿ ದಾಖಲುಪತ್ರಗಳನ್ನು ಉಪಯೋಗಿಸಿ ಕಲ್ಲಿಕೋಟೆ ಪಾಸ್ಪೋರ್ಟ್ ಕಚೇರಿಯಿಂದಲೂ ಇನ್ನೊಂದು ಪಾಸ್ಪೋರ್ಟ್ ಪಡೆದಿದ್ದಾನೆಂಬ ದೂರು ಕೂಡಾ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.