ಚಿರತೆ ಭಯ ನೀಗಿಸಲು ಅರಣ್ಯ ಇಲಾಖೆಯಿಂದ ಬಿಗು ನಿಗಾ

ಬೋವಿಕ್ಕಾನ: ಬೋವಿಕ್ಕಾನದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ರಾತ್ರಿ ತಪಾಸಣೆಯನ್ನು ತೀವ್ರಗೊಳಿಸಿದೆ. ಕಾರಡ್ಕ, ಮುಳಿಯಾರು, ದೇಲಂಪಾಡಿ, ಪುಲ್ಲೂರು-ಪೆರಿಯ, ಬೇಡಡ್ಕ, ಕುತ್ತಿಕ್ಕೋಲ್ ಪಂಚಾಯತ್‌ಗಳ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಚಿರತೆಯ ಭೀತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜಾಗ್ರತೆ ಪಾಲಿಸುತ್ತಿದೆ.

ಕಳೆದ ಆಗಸ್ಟ್‌ನಿಂದ ವಿವಿಧ ಪಂಚಾಯತ್‌ಗಳಲ್ಲಿ ಸಾಕು ಪ್ರಾಣಿಗಳನ್ನು ಆಕ್ರಮಿಸಿ ಕೊಂದ ಹಲವು ಪ್ರಕರಣಗಳು ವರದಿಯಾಗಿದ್ದು, ಮುಂದೆ ಈ ರೀತಿ ಸಂಭವಿಸದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ. ಚಿರತೆ ಇರುವ ಸ್ಥಳವನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ವಿವಿಧ ಪ್ರದೇಶಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿದೆ. ಕಾರಡ್ಕ, ಮುಳಿಯಾರು ಪಂಚಾಯತ್‌ಗಳಲ್ಲಿ ಸಾರ್ವಜನಿಕ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ. ಎನ್‌ಟಿಸಿಎ ಮಾರ್ಗ ಸೂಚಿಗಳ ಪ್ರಕಾರ ತಜ್ಞರ ಸಮಿತಿಯನ್ನು ನೇಮಕಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಎರಡು ದೊಡ್ಡ ಗೂಡುಗಳನ್ನು ಸ್ಥಾಪಿಸಿ ನಿರೀಕ್ಷಿಸಲಾಗುತ್ತಿದೆ. ಚಿರತೆ ಭಯ ಪೀಡಿತ ಪ್ರದೇಶದಲ್ಲಿ ೧೭ ಕಡೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ರಸ್ತೆಗೆ ತಾಗಿಕೊಂಡಿರುವ ಅರಣ್ಯ ಪ್ರದೇಶಗಳ ಗಿಡಗಳನ್ನು ಕಡಿದು ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.

ಬೋವಿಕ್ಕಾನದಲ್ಲಿ ಕ್ಷಿಪ್ರ ಕಾರ್ಯಪಡೆ ಹಗಲು-ರಾತ್ರಿ ನಿಗಾ ವಹಿಸುತ್ತಿದೆ. ಶಾಲಾ ಮಕ್ಕಳು ಸಂಚರಿಸುವ ಅರಣ್ಯ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆ ಹೆಚ್ಚಿಸಲಾಗಿದೆ. ಕ್ಯಾಮರಾ ಬಲೆಗಳು, ದೀಪಗಳು, ಡ್ರೋನ್ ನಿರೀಕ್ಷಣೆ ಮೊದಲಾದವುಗಳನ್ನು ಬಳಸಿಕೊಂಡು ಚಿರತೆಯನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page