ನಕಲಿ ಚಿನ್ನ ಅಡವಿರಿಸಿ ವಂಚನೆ: ಮಹಿಳೆಯರ ಸಹಿತ ನಾಲ್ಕು ಮಂದಿ ವಿರುದ್ಧ ಕೇಸು
ಕಾಸರಗೋಡು: ಅಲ್ಪ ಬಿಡುವಿನ ಬಳಿಕ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ವಂಚಿಸಿದ ಪ್ರಕರಣ ವರದಿಯಾಗಿದೆ. ಈ ಸಂಬಂಧ ಹೊಸದುರ್ಗ, ನೀಲೇಶ್ವರ ಪೊಲೀಸ್ ಠಾಣೆಗಳಲ್ಲಾಗಿ ಎgಡು ಕೇಸುಗಳನ್ನು ದಾಖಲಿಸಲಾಗಿದೆ.
ಮುತ್ತೂಟ್ ಫಿನ್ಕೋರ್ಪ್ನ ಕಾಞಂಗಾಡ್, ಕೋಟಚ್ಚೇರಿ ಬ್ರಾಂಚ್ ಮೆನೇಜರ್ ಅದಿಯಾಂಬೂರ್ ಕುನ್ನುಮ್ಮಲ್ ಹೌಸ್ನ ಎಂ. ಮಂಜುಳ ನೀಡಿದ ದೂರಿನಂತೆ ಕೊಳವಯಲ್ ಮುಟ್ಟುಂತಲದ ಎ.ನೌಶಾದ್ ಎಂಬಾತನ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. 2025 ಜನವರಿ 23ರಂದು ವಂಚನೆ ನಡೆದಿರುವುದಾಗಿ ತಿಳಿಸಲಾಗಿದೆ. ಅಂದು ಮಧ್ಯಾಹ್ನ ಸಂಸ್ಥೆಗೆ ತಲುಪಿದ ಆರೋಪಿ 11.9 ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ 65,726 ರೂಪಾಯಿ ಪಡೆದು ವಂಚಿಸಿರುವು ದಾಗಿ ಕೇಸು ದಾಖಲಾಗಿದೆ.
ಇನ್ನೊಂದು ಘಟನೆಯಲ್ಲಿ ಕರಿಂದಳಂ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ವಿ. ಮಧುಸೂದನನ್ ನೀಡಿದ ದೂರಿನಂತೆ ನೀಲೇಶ್ವರ ಪೊಲೀಸರು ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಕರಿಂದಳ ಕೊಲ್ಲಂಪಾರೆ ವಾಳೂರ್ನ ವಿ. ರಮ್ಯ, ಕರಿಂದಳ ಶಿಜಿತ್, ರತಿಕಲ ಎಂಬವರ ವಿರುದ್ಧ ಕೇಸು ದಾಖಲಾಗಿದೆ. ಗುರುವಾರ ಬ್ಯಾಂಕ್ಗೆ ತಲುಪಿದ ಆರೋಪಿಗಳು 26.400 ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ ಹಣ ಲಪಟಾಯಿಸಲು ಯತ್ನಿಸಿರುವುದಾಗಿ ದೂರಲಾಗಿದೆ. ನಕಲಿ ಚಿನ್ನದ ಮೂಲ ಪತ್ತೆಹಚ್ಚಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.