ನಿಲ್ಲಿಸಿದ್ದ ಬಸ್ನ ಹಿಂಬದಿಗೆ ಲಾರಿ ಢಿಕ್ಕಿ: ಇಬ್ಬರು ಅಧ್ಯಾಪಿಕೆಯರಿಗೆ ಗಾಯ
ಕುಂಬಳೆ: ನಿಲ್ಲಿಸಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್ನ ಹಿಂಬದಿಗೆ ಲಾರಿ ಢಿಕ್ಕಿಹೊಡೆದ ಪರಿಣಾಮ ಇಬ್ಬರು ಅಧ್ಯಾಪಿಕೆಯರು ಗಾಯಗೊಂಡಿದ್ದಾರೆ.
ಶಿರಿಯ ಜಿಎಚ್ಎಸ್ಎಸ್ನ ಅಧ್ಯಾಪಿಕೆಯರಾದ ಮಾಯಿಪ್ಪಾಡಿ ನಿವಾಸಿ ನಳಿನಾಕ್ಷರ ಪತ್ನಿ ಅಕ್ಷಿತಾ (28), ಕಲ್ಲಿಕೋಟೆ ನಿವಾಸಿ ಬೇಬಿ (32) ಎಂಬಿವರು ಗಾಯಗೊಂಡವ ರಾಗಿದ್ದಾರೆ. ಈ ಪೈಕಿ ಅಕ್ಷಿತಾರನ್ನು ಕುಂಬಳೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೇಬಿ ಪ್ರಥಮ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದಾರೆ.
ನಿನ್ನೆ ಸಂಜೆ ಶಿರಿಯ ಬಸ್ ಸ್ಟಾಪ್ನಲ್ಲಿ ಅಪಘಾತವುಂಟಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದು ಕೆಎಸ್ಆರ್ಟಿಸಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಎನ್ಪಿ ಲಾರಿ ಬಸ್ನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಹತ್ತುತ್ತಿದ್ದ ಅಧ್ಯಾಪಿಕೆಯರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅಪಘಾತದಲ್ಲಿ ಬಸ್ನ ನಿರ್ವಾಹಕ ಕೂಡಾ ಗಾಯಗೊಂಡಿದ್ದರೆನ್ನಲಾಗಿದೆ. ಬಸ್ನ ಪ್ರಯಾಣಿಕರನ್ನು ಬೇರೆ ಬಸ್ನಲ್ಲಿ ಕಳುಹಿಸಲಾಯಿತು. ಅಪಘಾತ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಬಸ್ ಹಾಗೂ ಲಾರಿಯನ್ನು ಕಸ್ಟಡಿಗೆ ತೆಗೆದಿದ್ದಾರೆ.