ಪಶ್ಚಿಮ ಬಂಗಾಳ ನಿವಾಸಿ ಯುವತಿಗೆ ಮದ್ಯ ನೀಡಿ ಸಾಮೂಹಿಕ ಮಾನಭಂಗ: ಮೂವರ ಸೆರೆ

ತಲಪಾಡಿ: ಮಂಜೇಶ್ವರ ಸ್ಟೇಷನ್ ವ್ಯಾಪ್ತಿಯ ಫ್ಲೈವುಡ್ ಫ್ಯಾಕ್ಟ್ರಿ ತಂಡದಲ್ಲಿ ಕೆಲಸಕ್ಕಿದ್ದ ಪಶ್ಚಿಮ ಬಂಗಾಳ ನಿವಾಸಿ ಯುವತಿಯೋರ್ವೆಯನ್ನು ಸಾಮೂಹಿಕವಾಗಿ ಮಾನಭಂಗಪಡಿಸಿದ ಘಟನೆಯಲ್ಲಿ  ಮೂವರನ್ನು ಸೆರೆ ಹಿಡಿಯಲಾಗಿದೆ. ಉಳ್ಳಾಲ ಕುತ್ತಾರು ರಾಣಿಪುರ ರಿಷಿವನ ಸಮೀಪ ಬುಧವಾರ ಮಧ್ಯರಾತ್ರಿ ಘಟನೆ ನಡೆದಿದೆ.

ಮಂಗಳೂರಿನಲ್ಲಿ ಆಟೋ ಚಾಲಕ ನಾಗಿರುವ ಮುಲ್ಕಿ ಕಾರ್ನಾಡು ಲಿಂ ಗಪ್ಪಯ್ಯ ಕಾಡು ನಿವಾಸಿ ಪ್ರಭುರಾಜ್ (38), ಪೈಂಟರ್ ಕೆಲಸ ಮಾಡುವ ಕುಂಪಳ ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37), ಡೆಲಿವರ್ ಬಾಯ್ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) ಬಂಧಿತ ಆರೋಪಿಗಳು.

ಘಟನೆಯ ವಿವರ: ಮಂಗಳೂರಿನಲ್ಲಿ ಬೇರೆ ಉದ್ಯೋಗಕ್ಕಾಗಿ ಬುಧವಾರ ಯುವತಿ ಮಂಗಳೂರಿಗೆ ತಲುಪಿದ್ದಳು. ಈಕೆಯ ಜೊತೆಯಲ್ಲಿ ಗೆಳೆಯನೂ ಮಂಗಳೂರಿಗೆ ತೆರಳಿದ್ದನು. ಆದರೆ ಅವರಿಬ್ಬರ ಮಧ್ಯೆಜಗಳವುಂಟಾಗಿ ಯುವತಿಯ ಮೊಬೈಲ್ ಹಾನಿಗೊಂಡಿತ್ತು. ಮೊಬೈಲ್ ದುರಸ್ತಿಗೆಂದು ಯುವತಿ ಆರೋಪಿ ಪ್ರಭುರಾಜ್‌ನ ಆಟೋ ಹತ್ತಿದ್ದು, ಆತ ಆಕೆಯನ್ನು ಕರೆದುಕೊಂಡು ಹೋಗಿ ಮೊಬೈಲ್ ಸರಿಪಡಿಸಿ ಬಳಿಕ ನಗರವನ್ನೆಲ್ಲಾ ಸುತ್ತಾಡಿಸಿ ರಾತ್ರಿ ವೇಳೆ ಆಕೆಯನ್ನು ರೈಲು ನಿಲ್ದಾಣಕ್ಕೆ ಬಿಡುವುದಾಗಿ ತಿಳಿಸಿದ್ದನು. ಈ ಮಧ್ಯೆ ಆಕೆಗೆ ಆಹಾರ ನೀಡಿ ಕುಡಿಯಲು ಪೇಯವನ್ನು ಕೊಟ್ಟಿದ್ದು, ಅದರಲ್ಲಿ ಮದ್ಯ ಸೇರಿಸಿದ್ದನೆಂದು ಹೇಳಲಾಗಿದೆ. ಅಮಲಿನಿಂದ ವರ್ತಿಸುತ್ತಿದ್ದ ಯುವತಿಯನ್ನು ತನ್ನಿಬ್ಬರು ಗೆಳೆಯರ ಸಹಿತ ರಿಕ್ಷಾ ಚಾಲಕ ಕಾರಿನಲ್ಲಿ ಕರೆದೊಯ್ದಿದ್ದು, ಮಧ್ಯರಾತ್ರಿ ವೇಳೆ ನೇತ್ರಾವತಿ ನದಿ ತೀರದ ರಾಣಿಪುರ ರಸ್ತೆ ಬದಿ ತಲುಪಿದ್ದಾರೆ. ಈ ವೇಳೆ ಯುವತಿ ಬೊಬ್ಬೆಹೊಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಅರೆಪ್ರಜ್ಞಾವಸ್ಥೆಯಲ್ಲಿ ಯುವತಿ ಸಮೀಪದ ಮನೆಗೆ ತಲುಪಿ ಬಾಗಿಲು ಬಡಿದಿದ್ದು, ಕುಡಿಯಲು ನೀರು ಕೇಳಿದ್ದಳು. ನೀರು ಕುಡಿದ ಈಕೆ ಪ್ರಜ್ಞೆ ತಪ್ಪಿ ಬಿದ್ದಿದ್ದು ಕೂಡಲೇ ಆ ಮನೆಯವರು ಉಳ್ಳಾಲ ಪೊಲೀಸರಿಗೆ ಕರೆದು ಮಾಹಿತಿ ನೀಡಿದ್ದಾರೆ. ಇದರಂತೆ ಪೊಲೀಸರು ತಲುಪಿ ಯುವತಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ತಲುಪಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿ ಗೂಗಲ್ ಪೇ ಮೂಲಕ ಆರೋಪಿ ರಿಕ್ಷಾ ಚಾಲಕನಿಗೆ ಹಣ ಕಳುಹಿಸಿದ್ದು, ಇದರ ಜಾಡು ಹಿಡಿದು ಪತ್ತೆಹಚ್ಚಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page