ಪಹಲ್ಗಾಮ್ ಉಗ್ರರ ದಾಳಿ :ದಿಲ್ಲಿಯಲ್ಲಿ ಮಹತ್ವದ ಸಚಿವ ಸಂಪುಟ, ಸಭೆ ಆರಂಭ; ಶೀಘ್ರ ತಿರುಗೇಟು ಸಾಧ್ಯತೆ
ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ತಮ್ಮ ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ನಿನ್ನೆ ರಾತ್ರಿಯೇ ದೆಹಲಿಗೆ ಹಿಂತಿರುಗಿದ್ದಾರೆ. ಮಾತ್ರವಲ್ಲ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಅವರು ವಿದೇಶಾಂಗ ಸಚಿವ ಎಸ್. ಜಯಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ವಿದೇಶಾಂಗ ಕಾರ್ಯ ದರ್ಶಿ ವಿಕ್ರಂ ಮಿಶ್ರ ಮತ್ತು ಇತರ ಅಧಿಕಾರಿಗಳೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದರು.
ಇದಾದ ಬಳಿಕ ಪ್ರಧಾನಿ ನೇತೃತ್ವದಲ್ಲಿ ದೆಹಲಿಯಲ್ಲಿ ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್)ನ ಮಹತ್ವದ ಸಭೆ ಆರಂಭಗೊಂಡಿದೆ. ಉಗ್ರರ ದಾಳಿಗೆ ಶೀಘ್ರ ಸೂಕ್ತ ರೀತಿಯ ತಿರುಗೇಟು ನೀಡುವ ತೀರ್ಮಾನವನ್ನೂ ಈ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಗೃಹ ಸಚಿವ ಅಮಿತ್ ಷಾ ತುರ್ತಾಗಿ ಶ್ರೀನಗರಕ್ಕೆ ತೆರಳಿ ಅಲ್ಲಿ ಐ.ಬಿ ಮುಖ್ಯಸ್ಥರು, ಗೃಹ ಕಾರ್ಯದರ್ಶಿಗಳ ತುರ್ತು ಸಭೆ ಕರೆದು ಅಗತ್ಯದ ನಿರ್ದೇಶ ನೀಡಿದ್ದಾರೆ. ಮಾತ್ರವಲ್ಲ ಭಯೋತ್ಪಾದಕ ದಾಳಿ ನಡೆದ ಸ್ಥಳಕ್ಕೂ ಅವರು ಸಂದರ್ಶಿಸಲಿದ್ದಾರೆ. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಮೃತದೇಹಗಳಿಗೆ ಅವರು ಶ್ರದ್ದಾಂಜಲಿ ಸಲ್ಲಿಸಿದರು. ಮೃತದೇಹಗಳನ್ನು ವಿಶೇಷ ವಿಮಾನದಲ್ಲಿ ಊರಿಗೆ ತಲುಪಿಸುವ ಕೆಲಸವೂ ಆರಂಭಿಸಲಾಗಿದೆ.
ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಮಾತ್ರವಲ್ಲ ದೆಹಲಿಯಲ್ಲೂ ತೀವ್ರ ಕಟ್ಟೆಚ್ಚರ ಪಾಲಿಸಲಾಗುತ್ತಿದೆ. ಇದು ಮಾತ್ರವಲ್ಲದೆ ಎಲ್ಲಾ ಪ್ರವಾಸಿ ತಾಣಗಳು ಮತ್ತು ಪ್ರಮುಖ ಕೇಂದ್ರಗಳ ಮೇಲೂ ತೀವ್ರ ನಿಗಾ ಸೂಚನೆ ನೀಡಲಾಗಿದೆ.
ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಉಗ್ರರ ತಂಡದಲ್ಲಿ ಆರು ಮಂದಿ ಒಳಗೊಂಡಿರುವುದು ಸ್ಪಷ್ಟಗೊಂಡಿದ್ದು, ಅದರಲ್ಲಿ ಓರ್ವ ಉಗ್ರನ ದೃಶ್ಯ ಆ ಪರಿಸರದ ಸಿಸಿ ಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಅದರ ಜಾಡು ಹಿಡಿದು ಭದ್ರತಾಪಡೆ ಜಮ್ಮು ಕಾಶ್ಮೀರದಾದ್ಯಂತ ವ್ಯಾಪಕ ಶೋಧ ಆರಂಭಿಸಿ ಹಲವರನ್ನು ಕಸ್ಟಡಿಗೆ ತೆಗೆದುಕೊಂಡಿದೆ.