ಪೆರಿಯ ವಾಹನ ಅಪಘಾತ: ಇಬ್ಬರ ನಿಧನದಿಂದ ನಾಡಿನಲ್ಲಿ ಶೋಕಸಾಗರ

ಹೊಸದುರ್ಗ: ಪೆರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ತಾಯನ್ನೂರು ಪೇರಳಪುದಿಯ ಪುರದ ಟಿ. ರಘುನಾಥ (೫೨), ಸ್ನೇಹಿತ ಚಪ್ಪಾರಪಡವಿನ ಸಿ. ರಾಜೇಶ್ (೩೭) ಎಂಬಿವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಗಂಭೀರ ಗಾಯಗೊಂಡ ತಾಯನ್ನೂರು ಪೇರಂಕಲ್ಲ್ ನಿವಾಸಿಗಳಾದ ಟಿ. ರಾಜೇಶ್ (೩೫), ರಾಹುಲ್ (೩೫) ಎಂಬಿವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೆರಿಯ ಚಾಣವಳಪ್ಪ್ ತರವಾಡಿನಲ್ಲಿ ನಡೆದ ವಯನಾಟ್ ಕುಲವನ್ ದೈವ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದವರು ಸಂಚರಿಸಿದ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರಿಯ ಕೇಂದ್ರೀಯ ವಿಶ್ವ ವಿದ್ಯಾಲಯ ಸಮೀಪ ನಿನ್ನೆ ಮುಂಜಾನೆ ೧.೩೦ರ ವೇಳೆ ಅಪಘಾತಕ್ಕೀಡಾಗಿದೆ. ರಸ್ತೆ ನವೀಕರಣದಂಗವಾಗಿ ಸ್ಥಾಪಿಸಿದ ಡಿವೈಡರ್‌ಗೆ ಢಿಕ್ಕಿ ಹೊಡೆದ ಬಳಿಕ ಸಮೀಪದ ಭಾರೀ ಹೊಂಡಕ್ಕೆ ಕಾರು ಮಗುಚಿ ಬಿದ್ದಿದೆ. ಕಾಞಂಗಾಡ್‌ನ ಖಾಸಗಿ ಡಿಶ್ ಕಂಪೆನಿಯ ನೌಕರನಾದ ರಘುನಾಥ್ ಅವಿವಾಹಿತನಾಗಿದ್ದಾರೆ. ದಿ| ಕುಂಞಂಬು ಟಿ. – ಮಾಧವಿ ದಂಪತಿಯ ಪುತ್ರನಾದ ಮೃತರು ಸಹೋದರ- ಸಹೋದರಿಯರಾದ ಟಿ. ರಾಜು, ಟಿ. ಪ್ರದೀಪ್, ಟಿ. ಬಿಂದು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಅದೇ ರೀತಿ ಮೃತಪಟ್ಟ ಸಿ. ರಾಜೇಶ್ ಪೈಂಟಿಂಗ್ ಕಂಪೆನಿಯ ಸೇಲ್ಸ್ ರೆಪ್ರಸೆಂಟೇಟಿವ್ ಆಗಿದ್ದರು. ಪಿ. ಅಂಬು- ಜಾನಕಿ ದಂಪತಿಯ ಪುತ್ರನಾದ ಮೃತರು ಪತ್ನಿ ಆದಿರ, ಪುತ್ರ ಋತಿಕ್ ಹಾಗೂ ೯ ತಿಂಗಳ ಪ್ರಾಯದ ಹೆಣ್ಣು ಮಗು, ಸಹೋದರ- ಸಹೋದರಿಯರಾದ ಸಿರಮ, ಸಿ. ರಂಜಿತ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರಿ ರಜನಿ ಈ ಹಿಂದೆ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page