ಬಸ್ ಕಾರ್ಮಿಕರಿಗೆ ಇನ್ನು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಕಡ್ಡಾಯ

ಕಾಸರಗೋಡು: ಖಾಸಗಿ ಬಸ್‌ಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಸ್ಟೇಜ್ ಕ್ಯಾರಿಯರ್ ವಾಹನಗಳ  ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಿ ಮೋಟಾರು ವಾಹನ ಇಲಾಖೆ ಸುತ್ತೋಲೆ ಜ್ಯಾರಿಗೊಳಿಸಿದೆ. ಜನವರಿ 24ರಂದು ನಡೆದ ಸ್ಟೇಟ್ ಟ್ರಾನ್ಸ್ ಪೋರ್ಟ್ ಅಥೋರಿಟಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಅದರ ಆಧಾರದಲ್ಲಿ ಮೋಟಾರು ವಾಹನ ಇಲಾಖೆ ಈಗ ಈ ಸುತ್ತೋಲೆ ಜ್ಯಾರಿಗೊಳಿಸಿದೆ.

ಇದರಂತೆ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿರುವವರು,  ಆರೋಪಿಗಳಾಗಿರುವವರು ಮತ್ತು ಶಿಕ್ಷೆಗೊಳಗಾದವರನ್ನು ಬಸ್‌ಗಳಲ್ಲಿ ಕಾರ್ಮಿಕರನ್ನಾಗಿ ನೇಮಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಮೋಟಾರು ವಾಹನ ಇಲಾಖೆ ಈ ಹೊಸ ಸುತ್ತೋಲೆ ಜ್ಯಾರಿಗೊಳಿಸಿದೆ. ಮದ್ಯದಮಲಿನಲ್ಲಿ ವಾಹನ ಚಲಾಯಿಸಿ ಅದಕ್ಕೆ ಸಂಬಂಧಿಸಿ ಹಲವು ಬಾರಿ ಶಿಕ್ಷೆಗೊಳಗಾದವರು, ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಹಲವು ಬಾರಿ ಶಿಕ್ಷೆಗೊಳಗಾದವರು, ಈ ಅಪಘಾತ ಸಾವು ಇತ್ಯಾದಿಗಳು ಶಿಕ್ಷೆಗೊಳಗಾದ ವರನ್ನು  ಬಸ್ ಸಿಬ್ಬಂದಿಗಳನ್ನಾಗಿ ನೇಮಿಸುವಂತಿಲ್ಲ.

ಇದರ ಹೊರತಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ, ನರಹತ್ಯೆ, ನರಹತ್ಯಾಯತ್ನ, ಗಂಭೀರವಾಗಿ ಗಾಯಗೊಳಿಸುವಿಕೆ, ಗಲಭೆ, ವಿಧ್ವಂಸಕ ಕೃತ್ಯ ಇತ್ಯಾದಿ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾದ ಅಥವಾ ಶಿಕ್ಷೆಗೊಳಗಾದವರನ್ನೂ ಇನ್ನು ಬಸ್ ಸಿಬ್ಬಂದಿಗಳನ್ನಾಗಿ ನೇಮಿಸುವಂತಿಲ್ಲ. ಬಸ್‌ಗಳ ಸಿಬ್ಬಂದಿಗಳನ್ನಾಗಿ ನೇಮಿಸಲ್ಪಡುವವರು ಅದರ ಮೊದಲು ನಾವು ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿಲ್ಲ, ಅಥವಾ ಶಿಕ್ಷೆಗೊಳಗಾಗಿಲ್ಲವೆಂಬ ಕ್ಲಿಯರೆನ್ಸ್ ಸರ್ಟಿಫಿಕೆಟ್‌ನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಂದ ಪಡೆಯಬೇಕು. ಇಂತಹ ಸರ್ಟಿಫಿಕೆಟ್ ಹಾಜರುಪಡಿಸುವವರಿಗೆ ಮಾತ್ರವೇ ಇನ್ನು ಬಸ್‌ಗಳ ಸಿಬ್ಬಂದಿಗಳನ್ನಾಗಿ ನೇಮಿಸಬಹುದೆಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page