ಬಿಜೆಪಿ ಮಧೂರು ಪಂ. ಈಸ್ಟ್, ವೆಸ್ಟ್ ಏರಿಯಾ ಪದಾಧಿಕಾರಿಗಳ ಪದಗ್ರಹಣ
ಮಧೂರು: ಕೇಂದ್ರ ಫಂಡ್ನ ಮೇಲೆ ಹಕ್ಕು ಮಂಡಿಸಲು ಹಾಗೂ ಅದು ತಮ್ಮ ಸಾಧನೆಯೆಂದು ಹೇಳಿಕೊಳ್ಳಲು ಕೇರಳದ ಎಡ-ಐಕ್ಯರಂಗಗಳು ಸ್ಪರ್ಧಿಸುತ್ತಿವೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಆರೋಪಿಸಿದ್ದಾರೆ. ಬಿಜೆಪಿ ಮಧೂರು ಪಂಚಾಯತ್ ಈಸ್ಟ್, ವೆಸ್ಟ್ ಏರಿಯಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಳಿಂಞಂ ಯೋಜನೆಯನ್ನು ಮೊಟಕುಗೊಳಿಸಲು ಪ್ರಯತ್ನಿಸಿದ ಪಿಣರಾಯಿ ವಿಜಯನ್ ಸಹಿತ ಎಡರಂಗ ನೇತಾರರು ಈಗ ಈ ಯೋಜನೆಯ ಸಾಧನೆ ತಮ್ಮದೆಂದು ಹೇಳಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಫಂಡನ್ನು ಬೇರೆ ಅಗತ್ಯಗಳಿಗೆ ಬಳಸಲು ಪ್ರಯತ್ನ ನಡೆಯುತ್ತಿದೆ. ಎಡರಂಗ ಹೇಳಿಕೊಳ್ಳುವ ಅಭಿವೃದ್ಧಿ ಸುಳ್ಳಾಗಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ರ ನೇತೃತ್ವದಲ್ಲಿ ವಿಕಸಿತ್ ಕೇರಳ ಎಂಬ ಸಂಕಲ್ಪವನ್ನು ಸಾಕ್ಷಾತ್ಕಾರಗೊಳಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಇದಕ್ಕಿರುವ ಕ್ರಿಯಾ ಯೋಜನೆ ಸಿದ್ಧಗೊಂಡಿರುವುದಾಗಿ ಪಿ.ಆರ್. ಸುನಿಲ್ ತಿಳಿಸಿದರು. ಮಧೂರು ವೆಸ್ಟ್ ಏರಿಯಾ ಅಧ್ಯಕ್ಷ ಮಾಧವ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಶ್ರೀಧರ ಕೂಡ್ಲು, ಮಧೂರು ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ, ಸತೀಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲ, ರವಿ ಗಟ್ಟಿ ಮೊದಲಾದವರು ಮಾತನಾಡಿದರು. ಶಶಿಧರ ಸ್ವಾಗತಿಸಿ, ಧನಂಜಯ ಮಧೂರು ವಂದಿಸಿದರು.