ಬೈಕ್ ಅಪಘಾತದಲ್ಲಿ ಗಾಯಗೊಂಡ ಬಂಬ್ರಾಣ ನಿವಾಸಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ತಿರುವನಂತಪುರ ದಲ್ಲಿ ಸಂಭವಿಸಿದ  ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಬ್ರಾಣ ಬಳಿಯ ನಿವಾಸಿಯಾದ ಯುವಕ  ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. 

ಬಂಬ್ರಾಣ ಅಂಡಿತ್ತಡ್ಕ ನಿವಾಸಿ ದಿ| ಪಳ್ಳಿಕುಂಞಿ ಕುದೂರು- ಖದೀಜ ದಂಪತಿಯ ಪುತ್ರ ಅಪ್ಸಲ್ (೨೭) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ತಿರುವನಂತಪುರದಲ್ಲಿ ಜವುಳಿ ಅಂಗಡಿಯೊಂದರಲ್ಲಿ ಸೇಲ್ಸ್‌ಮೆನ್ ಆಗಿದ್ದ ಅಪ್ಸಲ್ ಎರಡು ದಿನಗಳ ಹಿಂದೆ  ರಾತ್ರಿ ಹೊತ್ತಿನಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬೈಕ್ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದ ಅಪ್ಸಲ್ ಅಲ್ಲಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ವಾಸಸ್ಥಳಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಮಧ್ಯೆ ನಿನ್ನೆ ಸಂಜೆ ಶೌಚಾಲಯಕ್ಕೆ ತೆರಳುತ್ತಿದ್ದಾಗ ಅಪ್ಸಲ್ ಕುಸಿದು ಬಿದ್ದಿದ್ದಾರೆನ್ನಲಾಗಿದೆ. ಕೂಡಲೇ ಪರಿಸರ ನಿವಾಸಿಗಳು ಅವರನ್ನು ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಮುಂಜಾನೆ ವೇಳೆ ಅವರು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ವಿಷಯ ತಿಳಿದು ಸಂಬಂಧಿಕರು ತಿರುವನಂತಪುರಕ್ಕೆ ತೆರಳಿದ್ದಾರೆ. ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಸಹೋದರನ ಮದುವೆ ಕಾರ್ಯಕ್ರಮಕ್ಕಾಗಿ ಒಂದೂವರೆ ತಿಂಗಳ ಹಿಂದೆ ಮನೆಗೆ ಬಂದಿದ್ದ ಅಪ್ಸಲ್ ಹತ್ತು ದಿನಗಳ ಹಿಂದೆಯಷ್ಟೇ ಮರಳಿ ತಿರುವನಂತಪುರಕ್ಕೆ ತೆರಳಿದ್ದರು. ಯುವಕನ ಅಕಾಲಿಕ ನಿಧನ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಮೃತರು ಸಹೋದರ- ಸಹೋದರಿಯರಾದ ರಜಾಕ್, ಸಾಹದ್, ಬಿಲಾಲ್, ರಮ್ಲ, ಅನೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page