ಕುಂಬಳೆ : ಮನೆಯವರು ಹೊರಗೆ ತೆರಳಿ ಮರಳಿ ತಲುಪುವುದರೊಳಗೆ ಕಳ್ಳರು ಅಲ್ಲಿಗೆ ತಲುಪಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಯ್ಯಾರಿನಲ್ಲಿ ನಿನ್ನೆ ರಾತ್ರಿ ಈ ಕಳವು ನಡೆದಿದ್ದು, ಆರೋಪಿಗಳ ಪತ್ತೆಗಾಗಿ ಕುಂಬಳೆ ಪೊಲೀಸರು ಶೋಧ ಆರಂಭಿಸಿದ್ದಾರೆ.
ಪಾಲಕ್ಕಾಡ್ನಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಕಯ್ಯಾರಿನ ಯೂಸಫ್ ಎಂಬವರ ಮನೆಯಿಂದ ನಿನ್ನೆ ರಾತ್ರಿ 7.30-8.30ರ ಮಧ್ಯೆ ಕಳವು ನಡೆದಿದೆ. ಯೂಸಫ್ರ ಪತ್ನಿ ಮೈಮೂನ ಹಾಗೂ ಮೂವರು ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರು ನಿನ್ನೆ ರಾತ್ರಿ 7.30ರ ವೇಳೆ ಕಯ್ಯಾರಿನ ಮಸೀದಿಗೆ ಸ್ವಲಾತ್ಗಾಗಿ ತೆರಳಿದ್ದರು. 8.30ಕ್ಕೆ ಅವರು ಮರಳಿ ತಲುಪಿ ನೋಡಿದಾಗ ಮನೆಯ ಬೆಡ್ರೂಂನಲ್ಲಿರುವ ಕಪಾಟುಗಳು ತೆರೆದಿರುವುದು ಕಂಡುಬಂದಿದೆ. ಬಳಿಕ ನಡೆಸಿದ ಪರಿಶೀಲನೆ ವೇಳೆ ಕಪಾಟಿನಲ್ಲಿದ್ದ ೫ ಪವನ್ ಚಿನ್ನಾಭರಣ ಕಳವಿಗೀಡಾಗಿರುವುದು ತಿಳಿದುಬಂದಿದೆ. ಟೆರೆಸ್ನ ಮೇಲೆ ಹತ್ತಿದ ಕಳ್ಳರು ಅಲ್ಲಿಂದ ಏಣಿ ಕೊಠಡಿಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಅನಂತರ ಕೊಠಡಿ ಯಲ್ಲಿದ್ದ ಕೀಲಿಕೈ ಉಪಯೋಗಿಸಿ ಚಿನ್ನಾಭರಣ ದೋಚಿರುವುದಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ಮನೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಲುಪಿ ಪರಿಶೀಲನೆ ನಡೆಸಿದ್ದಾರೆ.





