ಮಂಗಳೂರಿನಲ್ಲಿ ಕಾರು ಅಪಘಾತ: ಮಲಪ್ಪುರಂ ನಿವಾಸಿ ಮೃತ್ಯು; ಜತೆಗಿದ್ದ ವಿದ್ಯಾರ್ಥಿನಿಗೆ ಗಾಯ
ಮಂಗಳೂರು: ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿವೈಡರ್ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮಲಪ್ಪುರಂ ನಿವಾಸಿ ಮೃತಪಟ್ಟಿದ್ದಾರೆ. ಅಳಿಕ್ಕೋಡ್ ತಾಳೆಕೊಳಕೋಟೂರು ಎಂ.ಪಿ. ಹೌಸ್ನ ಅಬ್ದುಲ್ ಕಬೀರ್ ಎಂಬವರ ಪುತ್ರ ಮುಹಮ್ಮದ್ ಅಮಲ್ (29) ಮೃತಪಟ್ಟ ದುರ್ದೈವಿ. ಸೋಮವಾರ ರಾತ್ರಿ 12 ಗಂಟೆಗೆ ಅಪಘಾತವುಂಟಾಗಿದೆ. ಸ್ನೇಹಿತೆಯೊಂದಿಗೆ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಂತೂರು ಬಳಿ ಕಾರು ಡಿವೈಡರ್ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ ಅಮಲ್ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಮಲ್ ಜತೆಗೆ ಕಾರಿನಲ್ಲಿದ್ದ ಆಲಪ್ಪುಳ ನಿವಾಸಿಯಾದ ವಿದ್ಯಾರ್ಥಿನಿ ಗಾಯಗೊಂಡಿದ್ದು ಈಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಮಲ್ ಫಿಸಿಯೋಥೆರಫಿ ಪದವಿ ಪೂರ್ತಿಗೊಳಿಸಿ ದೇರಳಕಟ್ಟೆ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಾರು ರಸ್ತೆಯಲ್ಲಿ ಮಗುಚಿ ಬಿದ್ದ ವೇಳೆ ಅದರ ಹಿಂದೆ ಬರುತ್ತಿದ್ದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.