ಮಾದಕದ್ರವ್ಯ ವಿರುದ್ಧ ಅಭಿಯಾನ, ಕಿಕ್ ಡ್ರಗ್ಸ್: ರಾಜ್ಯ ಮಟ್ಟದ ಯಾತ್ರೆಗೆ ಕ್ರೀಡಾಸಚಿವರಿಂದ ಚಾಲನೆ
ಕಾಸರಗೋಡು: ರಾಜ್ಯ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಮಾದಕದ್ರವ್ಯ ವಿರೋಧಿ ಅಭಿಯಾನವಾದ ಕಿಕ್ ಡ್ರಗ್ಸ್ನ ರಾಜ್ಯ ಮಟ್ಟದ ಉದ್ಘಾಟನೆಯನ್ನು ಕ್ರೀಡಾ ಸಚಿವ ಅಬ್ದುಲ್ ರಹಿಮಾನ್ ಇಂದುಬೆಳಿಗ್ಗೆ ಕಾಸರಗೋಡು ಕಲೆಕ್ಟರೇಟ್ ಪರಿಸರದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಉದ್ಘಾಟಿಸಿ ಚಾಲನೆ ನೀಡಿದರು.
ಶಾಸಕರಾದ ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ವಿಜಯ್ ಭರತ್ ರೆಡ್ಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಜಿಲ್ಲಾ ಸ್ಪೋಟ್ಸ್ ಕೌನ್ಸಿಲ್ ಅಧ್ಯಕ್ಷ ಪಿ. ಹಬೀಬ್ ರಹ್ಮಾನ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿ ಗಳು ಹಾಗೂ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿದರು.
ಮಕ್ಕಳಲ್ಲಿ ಮಾದಕದ್ರವ್ಯ ವ್ಯಸನ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಕ್ರೀಡಾ ಇಲಾಖೆ ಕಿಕ್ ಡ್ರಗ್ಸ್ ಎಂಬ ಹೆಸರಿನಲ್ಲಿ ಈ ಅರಿವು ಮೂಡಿಸುವ ಅಭಿಯಾನ ಆರಂಭಿಸಿದೆ. ಇದು ರಾಜ್ಯದ ಎಲ್ಲಾ ೧೪ ಜಿಲ್ಲೆಗಳಲ್ಲೂ ಪರ್ಯಟನೆ ನಡೆಸಲಿದೆ. ಮಾದಕದ್ರವ್ಯ ವಿರುದ್ಧ ಪ್ರಚಾರದಂಗವಾಗಿ ಉದುಮ ಪಾಲಕುನ್ನಿನಲ್ಲಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ವಿಜಯ್ ಭರತ್ ರೆಡ್ಡಿ ಹಸಿರು ನಿಶಾನೆ ನೀಡಿದ ಮಿನಿ ಮೆರಥಾನ್ ಸ್ಪರ್ಧೆ ಕಲೆಕ್ಟರೇಟ್ ಸಮೀಪ ಇಂದು ಬೆಳಿಗ್ಗೆ ಸಮಾಪ್ತಿಕೊಂಡಿತು. ಕ್ರೀಡಾ ಸಚಿವರು ಕಲೆಕ್ಟರೇಟ್ ಮುಂದಿನ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆಗೈದ ಬಳಿಕ ಕಿಕ್ ಡ್ರಗ್ಸ್ ಸಂದೇಶ ಯಾತ್ರೆಗೆ ಚಾಲನೆ ನೀಡಿದರು. ಸಿವಿಲ್ ಸ್ಟೇಶನ್ನಿಂದ ನಗರದ ಹೊಸ ಬಸ್ ನಿಲ್ದಾಣ ತನಕ ವಾಕತ್ತೋನ್ ಅಭಿಯಾನ ನಡೆಸಲಾಯಿತು. ಮಾದಕದ್ರವ್ಯ ಸಂದೇಶ ಪ್ರಚಾರ ಜಾಥಾದ ಸಮಾರೋಪದಂಗವಾಗಿ ಇಂದು ಸಂಜೆ ೩ ಗಂಟೆಗೆ ಚೆರ್ವತ್ತೂರು ಬಸ್ ನಿಲ್ದಾಣದಿಂದ ಮ್ಯಾರಥೋನ್ ಆರಂಭಗೊಂಡು ಕಾಲಿಕಡವು ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ.