ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಮಾದಕವಸ್ತು ಸಾಗಿಸುವ ಜಾಲದ ಇಬ್ಬರ ಸೆರೆ  

ಬದಿಯಡ್ಕ: ಕಾಸರಗೋಡು ಸೇರಿದಂತೆ ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ಮಾದಕವಸ್ತುವಾದ ಎಂಡಿಎಂಎ ಪೂರೈಸುವ ಜಾಲದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಕಲ್ಲಿಕೋಟೆ ಚಾಲಪುರಂ ಪೆರುಂಕುಳಿಪಾಡದ ಪಿ. ರಂಜಿತ್ (30) ಮತ್ತು ಮಡಿಕೇರಿ ಕುಂಜಿಲ್ ಪ್ಲಾರಿಕೆ ರಸ್ತೆ ಬಳಿಯ ಮಡಪಳ್ಳಿ ಹೌಸ್‌ನ ಸಫಾದ್ ಎಂ.ಎ (26) ಬಂಧಿತ ಆರೋಪಿಗಳು. ಇವರು ಕೇರಳಕ್ಕೆ ಎಂಡಿಎಂಎ ಸಾಗಿಸುವ  ಜಾಲದ ಪ್ರಧಾನ ಸೂತ್ರಧಾರರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇವರು ಬೆಂಗಳೂರಿನಿಂದ ಕೇರಳದ ಹಲವೆಡೆಗಳಿಗೆ ಎಂಡಿಎಂಎ ಪೂರೈಸುವವರಾಗಿದ್ದಾರೆ.  ಬದಿಯಡ್ಕ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುಧೀರ್ ನೇತೃತ್ವದಲ್ಲಿ ಎಸ್‌ಐ ಉಮೇಶ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಪ್ರಸಾದ್, ಶಶಿ ಕುಮಾರ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಮೊಹಮ್ಮದ್ ಆರೀಫ್, ಅಭಿಲಾಷ್ ಮತ್ತು ವಿಪಿನ್ ಎಂಬವರನ್ನೊಳಗೊಂಡ  ಪೊಲೀಸರ ತಂಡ ಇವರನ್ನು ಬಂಧಿಸಿದೆ.

ಬಂಧಿತರು ಕಳೆದ ಜನವರಿ ೨೪ರಂದು ಪೆರ್ಲ ತಪಾಸಣಾ ಕೇಂದ್ರದಿಂದ ಪೊಲೀಸರು 83.890 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದ ಆರೋಪಿಗಳಾಗಿದ್ದಾರೆ.  ಅದಕ್ಕೆ ಸಂಬಂಧಿಸಿ ನಡೆಸಿದ ತನಿಖೆಯಲ್ಲಿ ಅವರನ್ನು ಈಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಬೆಂಗಳೂರಿನಲ್ಲ್ಲಿ ಅಕ್ರಮವಾಗಿ ಎಂಡಿಎಂಎ ತಯಾರಿಸುವ ಕೇಂದ್ರಗಳ ಏಜೆಂಟರನ್ನು ಸಂಪರ್ಕಿಸಿ ಅವರ ಮೂಲಕ ಅಗತ್ಯದಷ್ಟು ಮಾದಕವಸ್ತುಗಳನ್ನು ಖರೀದಿಸಿ ಅದನ್ನು ನಂತರ ಆನ್‌ಲೈನ್ ಮೂಲಕ ಅಗತ್ಯದವರಿಗೆ ಇವರು ಪೂರೈಸುತ್ತಿದ್ದಾರೆ. ಇದಕ್ಕಾಗಿ ಅವರು  ಗೂಗಲ್ ಲೊಕೇಶನ್ ಸೌಕರ್ಯವನ್ನು ಏರ್ಪಡಿಸಿದ್ದಾರೆ. ಬಂಧಿತರಲ್ಲಿ ರಂಜಿತ್ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಮಾದಕದ್ರವ್ಯ ವ್ಯವಹಾರದವರಿಗೆ ಅಗತ್ಯದಷ್ಟು ಮಾದಕವಸ್ತು ಪೂರೈಸುವ ಪ್ರಧಾನ ವ್ಯಕ್ತಿಯಾಗಿದ್ದಾನೆ. ಈ ಜಾಲದಲ್ಲಿ ಒಳಗೊಂಡಿರುವ ಇತರ ಕೊಂಡಿಗಳ ಪತ್ತೆಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page