ರಾಷ್ಟ್ರಪತಿ ಶಬರಿಮಲೆ ದರ್ಶನ: ಪಂಪಾದಿಂದ ಸನ್ನಿಧಾನಕ್ಕೆ ಎರಡು ದಾರಿಗಳ ಸಿದ್ಧತೆ
ಪತ್ತನಂತಿಟ್ಟ: ರಾಷ್ಟ್ರಪತಿ ದ್ರೌಪದಿ ಮುರ್ಮು ಈ ತಿಂಗಳ ೧೮ರಂದು ಶಬರಿಮಲೆ ಕ್ಷೇತ್ರ ದರ್ಶನ ನಡೆಸುವರು. ಅವರಿಗೆ ಪಂಪಾದಿಂದ ಮಲೆಯೇರಲು ಪರಂಪರಾಗತ ದಾರಿ ಹಾಗೂ ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ ಸಿದ್ಧತೆ ನಡೆಸಲಾಗುವುದು. ಹವಾಮಾನ ಹಾಗೂ ವಿಶ್ರಾಂತಿ ಸೌಕರ್ಯವನ್ನು ಪರಿಗಣಿಸಿ ಪರಂಪರಾಗತ ದಾರಿ ಮೂಲಕ ಮಲೆ ಮೆಟ್ಟುವುದು ಸೂಕ್ತವೆಂದು ರಾಷ್ಟ್ರಪತಿಯವರ ಭದ್ರತೆ ಹೊಣೆಗಾರಿಕೆಯುಳ್ಳ ಎಸ್.ಪಿ.ಜಿ ತಂಡಕ್ಕೆ ಪೊಲೀಸರು ತಿಳಿಸಿದ್ದಾರೆ. ಅಗತ್ಯ ಸೇವೆಯೆಂಬ ನೆಲೆಯಲ್ಲಿ ಸ್ವಾಮಿ ಅಯ್ಯಪ್ಪನ್ ರಸ್ತೆ ಮೂಲಕ ಎಮರ್ಜೆನ್ಸಿ ಆಂಬುಲೆನ್ಸ್ ಸೇವೆಯನ್ನೂ ಏರ್ಪಡಿಸಲಾಗುವುದು. ಯಾವ ದಾರಿ ಮೂಲಕ ರಾಷ್ಟ್ರಪತಿ ಸನ್ನಿಧಾನಕ್ಕೆ ತೆರಳುವರೆಂಬ ಬಗ್ಗೆ ಎಸ್ಪಿಜಿ ಪರಿಶೀಲನೆ ಬಳಿಕ ತೀರ್ಮಾನಿಸಲಾಗುವುದು. ಇದೇ ವೇಳೆ ರಾಷ್ಟ್ರಪತಿಯವರಿಗೆ ಮಲೆಯೇರಲು ಸಾಧ್ಯವಾಗದಿದ್ದಲ್ಲಿ ಸನ್ನಿಧಾನಕ್ಕೆ ತಲುಪಲು ನಾಲ್ಕು ಡೋಳಿಗಳನ್ನೂ ಏರ್ಪಡಿಸಲಾಗುವುದು. ಡೋಳಿ ಹೊತ್ತು ಅನುಭವವುಳ್ಳ ೧೬ ಮಂದಿಯನ್ನು ಇದಕ್ಕಾಗಿ ನೇಮಿಸಲಾಗುವುದು.