ರೈಲಿನಲ್ಲಿ ಟಿಕೆಟ್ ಕೇಳಿದ ಟಿಟಿಇ ಮೇಲೆ ಭಿಕ್ಷುಕನಿಂದ ಹಲ್ಲೆ

ತಿರುವನಂತಪುರ: ಅನ್ಯರಾಜ್ಯ ಕಾರ್ಮಿಕನೋರ್ವ ರೈಲುಗಾಡಿಯಿಂದ ಟಿಟಿಇಯನ್ನು ದೂಡಿ ಹಾಕಿ ಕೊಲೆಗೈದ ಘಟನೆಯ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಇಂದು ಬೆಳಿಗ್ಗೆ ತಿರುವನಂತಪುರ- ಕಣ್ಣೂರು ಜನ ಶತಾಬ್ದಿ ರೈಲಿನಲ್ಲಿ ಟಿಟಿಇ ಮೇಲೆ ಭಿಕ್ಷುಕನೋರ್ವ ಹಲ್ಲೆಗೈದು ಗಾಯಗೊಳಿಸಿದ್ದಾನೆ. ತಿರುವನಂತಪುರದಿಂದ ರೈಲು ಸಂಚಾರ ಆರಂಭಗೊಂಡ ಕೆಲವೇ ನಿಮಿಷದಲ್ಲಿ ಟಿಟಿಇ ಜೈಸನ್ ತೋಮಸ್ ಟಿಕೆಟ್ ತಪಾಸಣೆಗಾಗಿ ಬಂದಿದ್ದಾರೆ. ಪ್ರಯಾ ಣಿಕರ ಮಧ್ಯೆ ಕುಳಿತಿದ್ದ ಭಿಕ್ಷುಕನಲ್ಲಿ ಟಿಕೆಟ್ ಕೇಳಿದಾಗ ಆತ ರೋಷಗೊಂಡು ಟಿಟಿಇ ಮುಖಕ್ಕೆ ಹೊಡೆದಿದ್ದಾನೆಂದು ಹೇಳಲಾಗುತ್ತಿದೆ. ಕೂಡಲೇ ಅಕ್ರಮಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಹಲ್ಲೆಯಿಂದ ಟಿಟಿಇಯ ಕಣ್ಣಿಗೆ ಗಾಯವಾಗಿದೆ. ಮೊನ್ನೆ ಸಂಜೆ ಎರ್ನಾಕುಳಂ- ಪಾಟ್ನ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದುದನ್ನು ಪ್ರಶ್ನಿಸಿದ ಟಿಟಿಇಯನ್ನು ಅನ್ಯರಾಜ್ಯ ಕಾರ್ಮಿಕನೋರ್ವ ರೈಲಿನಿಂದ ದೂಡಿ ಹಾಕಿ ಕೊಲೆಗೈದ ದಾರುಣ ಘಟನೆ ನಡೆದಿತ್ತು.

ಎರ್ನಾಕುಳಂ ಮಞ್ಞಿಮ್ಮಲ್ ನಿವಾಸಿ ವಿನೋದ್ ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಘಟನೆ ಸಂ ಬಂಧ ಒಡಿಸ್ಸಾ ನಿವಾಸಿಯಾದ ರಜನಿಕಾಂತ್ ಎಂಬಾತನನ್ನು ಬಂಧಿಸಲಾಗಿದೆ. ಟಿಕೆಟ್ ಕೇಳಿ ಬಂದ ಟಿಟಿಇ ವಿನೋದ್ ರನ್ನು ರಜನಿಕಾಂತ್ ರೈಲಿನಿಂದ ಹೊರಗೆ ದೂಡಿ ಹಾಕಿದ್ದನು. ಇದರಿಂದ ಬೇರೊಂದು ಹಳಿ ಮೇಲೆ ಬಿದ್ದ  ವಿನೋದ್‌ರ ದೇಹದ ಮೇಲೆ ಬೇರೊಂದು ರೈಲು ಸಂಚರಿಸಿತ್ತು. ಇತರ ಪ್ರಯಾಣಿಕರು ನೀಡಿದ ಮಾಹಿತಿಯಂತೆ ರೈಲು ಹಳಿಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು.

Leave a Reply

Your email address will not be published. Required fields are marked *

You cannot copy content of this page