ವಾರ್ಷಿಕೋತ್ಸವ ಹೆಸರಲ್ಲಿ ಸರಕಾರದಿಂದ ಹಣ ಪೋಲು : ಅಭಿವೃದ್ಧಿ ಕಾರ್ಯ ಕುಂಟಿತ- ಎನ್ಟಿಯು ಆರೋಪ
ಕಾಸರಗೋಡು: ಕೇರಳ ಸರಕಾರದ ನಾಲ್ಕನೇ ವಾರ್ಷಿಕದ ಹೆಸರಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೋಟ್ಯಂತರ ರೂ. ವ್ಯರ್ಥ ಮಾಡಲಾಗುತ್ತಿದೆ ಎಂದು ಎನ್ಟಿಯು ಜಿಲ್ಲಾ ಸಮಿತಿ ಆರೋಪಿಸಿದೆ. ವಾರ್ಷಿಕ ಆಚರಣೆಗಳ ಹೆಸರಲ್ಲಿ ಪ್ರತೀ ಜಿಲ್ಲೆಯಲ್ಲೂ ಕೋಟ್ಯಂತರ ರೂ. ವೆಚ್ಚ ಮಾಡಿ ಚಪ್ಪರ, ಜಾಹೀರಾತು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಹಣ ಪೋಲು ಮಾಡಲಾಗುತ್ತಿದೆ. ಸರಕಾರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ನೌಕರರು ಮತ್ತು ಶಿಕ್ಷಕರಿಗೆ ಸವಲತ್ತುಗಳನ್ನು ನಿರಾಕರಿಸುತ್ತಿದೆ ಎಂದು ಜಿಲ್ಲಾ ಸಮಿತಿ ಆರೋಪಿಸಿದೆ. ಆರ್ಥಿಕ ಸಂದಿಗ್ಧತೆ ಹಿನ್ನೆಲೆಯಲ್ಲಿ ಶಾಲಾ ಕಲೋತ್ಸವದಲ್ಲಿ ಎ ಶ್ರೇಣಿಗಳನ್ನು ಪಡೆದ ಮಕ್ಕಳಿಗೆ ಬಹುಮಾನಗಳನ್ನು ನೀಡದೆ ವಿವಿಧ ರೀತಿಯ ಯೋಜನೆಗಳಿಗೆ ಹಣವಿಲ್ಲವೆನ್ನುವ ಸರಕಾರ ವಾರ್ಷಿಕೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದೆ ಎಂದು ಎನ್ಟಿಯು ದೂರಿದೆ. ಅಧ್ಯಕ್ಷ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಪ್ರಭಾಕರ ನಾಯರ್, ಎಂ. ರಂಜಿತ್, ಎ. ಅಜಿತ್ ಕುಮಾರ್, ಪಿ. ಅರವಿಂದಾಕ್ಷ ಭಂಡಾರಿ, ಒ. ಸತೀಶ್ ಕುಮಾರ್ ಶೆಟ್ಟಿ, ಎ. ಸುಜಿತ, ಮಹಾಬಲ ಭಟ್ ಮಾತನಾಡಿದರು.