ವಾಹನ ಅಪಘಾತ: ವಿದ್ಯಾರ್ಥಿಗೆ ಒಂದು ಕೋಟಿ ರೂ. ನಷ್ಟ ಪರಿಹಾರ ನೀಡಲು ತೀರ್ಪು
ಕಾಸರಗೋಡು: ವಾಹನ ಅಪ ಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಗೆ ಒಂದು ಕೋಟಿ ರೂ. ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಮೋಟಾರು ಆಕ್ಸಿಡೆಂಟ್ ಕ್ಲೈಮ್ ಟ್ರಿಬ್ಯೂನಲ್ ತೀರ್ಪು ನೀಡಿದೆ.
ಇದರಂತೆ ಪ್ಲಸ್ವನ್ ವಿದ್ಯಾರ್ಥಿ ಚೆಮ್ನಾಡು ಪಂಚಾಯತ್ನ ವಳಪೋತ್ತ್ ತಾನಂ ಪುರಕ್ಕಲ್ ವೀಡಿನ ಸುಕುಮಾರನ್-ಪ್ರೇಮ ದಂಪತಿ ಪುತ್ರ ಅಭಿಜಿತ್ (17) ಎಂಬಾತನಿಗೆ ಕೋಮಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪೆನಿ ಈ ನಷ್ಟಪರಿಹಾರ ನೀಡಬೇಕಾಗಿದೆ.
ಚೆಮ್ನಾಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಯಾಗಿರುವ ಅಭಿಜಿತ್ 2022 ಎಪ್ರಿಲ್ 27ರಂದು ಬೆಳಿಗ್ಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ದಾರಿ ಮಧ್ಯೆ ಪರುವನಡ್ಕದಲ್ಲಿ ಹಿಂದಿನಿಂದ ಅಮಿತ ವೇಗದಿಂದ ಬಂದ ಪಿಕಪ್ ವ್ಯಾನ್ ಆತನಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಅಭಿಜಿತ್ನ ಮೆದುಳು ಮತ್ತು ಬೆನ್ನೆಲುಬಿಗೆ ಗಂಭೀರ ಗಾಯ ಉಂಟಾಗಿತ್ತು.
ಇದರಿಂದ ಆತ ಮಂಗಳೂರು ಹಾಗೂ ವಯನಾಡು ಆಸ್ಪತ್ರೆಗಳಲ್ಲಾಗಿ ೧೦ ತಿಂಗಳ ತನಕ ದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತು. ಅದಕ್ಕೆ ಸಂಬಂಧಿಸಿ ನಷ್ಟ ಪರಿಹಾರ ಕೋರಿ ಸಲ್ಲಿಸಲಾದ ಅರ್ಜಿ ಯನ್ನು ಪರಿಶೀಲಿಸಿದ ಟ್ರಿಬ್ಯೂನಲ್ ಕೊನೆಗೆ ಈ ತೀರ್ಪು ನೀಡಿದೆ.