ಶಾಲೆಯಲ್ಲಿ ವಿದ್ಯುತ್ ತಂತಿಯಿಂದ ಶಾಕ್ ತಗಲಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ: ಮಕ್ಕಳ ಹಕ್ಕು ಆಯೋಗ, ಶಿಶು ಕ್ಷೇಮ ಸಮಿತಿಯಿಂದ ತನಿಖೆ ಆರಂಭ
ಕೊಲ್ಲಂ: ಕೊಲ್ಲಂ ತೇವಲಕ್ಕರ ಬೋಯ್ಸ್ ಹೈಸ್ಕೂಲ್ನ ಎಂಟನೇ ತರಗತಿ ವಿದ್ಯಾರ್ಥಿ, ಪಡಿಞಾರೇ ಕಲ್ಲಾಡ ವಲಿಯ ಪಾಡಂ ಮನು ಭವನದ ಮನು-ಸುಜಿ ದಂಪತಿ ಪುತ್ರ ಮಿಥುನ್ ಮನು (13) ವಿದ್ಯುತ್ ತಂತಿಯಿಂದ ಶಾಕ್ ತಗಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬಗ್ಗೆ ರಾಜ್ಯ ಮಕ್ಕಳ ಹಕ್ಕು ಆಯುಕ್ತರು ಇಂದು ಬೆಳಿಗ್ಗೆ ಪ್ರಸ್ತುತ ಶಾಲೆಗೆ ಆಗಮಿಸಿ ನೇರ ತನಿಖೆ ನಡೆಸಿದರು. ವಿದ್ಯುನ್ಮಂಡಳಿಯ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆಯೆಂದು ಆಯುಕ್ತರು ಹೇಳಿದ್ದಾರೆ.
ಇನ್ನೊಂದೆಡೆ ವಿದ್ಯುತ್ ಶಾಕ್ ತಗಲಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಪ್ರಸ್ತುತ ಶಾಲೆಯ ಮುಖ್ಯೋಪಾಧ್ಯಾ ಯಿನಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮಾತ್ರವಲ್ಲ ಆ ಶಾಲೆಯ ಇತರ ಅಧ್ಯಾಪಕರು ಮತ್ತು ಸಿಬ್ಬಂದಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸತೊಡಗಿದ್ದಾರೆ.
ವಿದ್ಯುನ್ಮಂಡಳಿ, ಪಂಚಾಯತ್ ಮತ್ತು ಶಾಲೆಯ ವತಿಯಿಂದ ಉಂಟಾದ ಗಂಭೀರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದೆ. ಶಾಲೆಯ ಎದುರುಗಡೆ ಶೆಡ್ನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ಅದರ ಮೇಲ್ಗಡೆ ಜೋತಾಡಿಕೊಂಡು ಸಾಗುವ ರೀತಿಯಲ್ಲಿ ವಿದ್ಯುತ್ ತಂತಿಯನ್ನು ಎಳೆಯಲಾಗಿದೆ. ಈ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಮೊದಲು ಈ ಶಾಲೆಯ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿತ್ತಾದರೂ ಸರಿಯಾದ ರೀತಿಯ ಪರಿಶೀಲನೆ ನಡೆಸಲಿಲ್ಲವೆಂದು ಈ ಬಗ್ಗೆ ಪೊಲೀಸರು ನಡೆಸಿದ ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಶಾಸ್ತಾಂಗೋಟ್ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅದರ ಅಂತಿಮ ವರದಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲಾಗುವುದು. ಶಿಶು ಕ್ಷೇಮ ಸಮಿತಿಯೂ ಶಾಲೆಯಲ್ಲಿ ತನಿಖೆ ಆರಂಭಿಸಿದೆ. ಎಲ್ಲಾ ತನಿಖೆಗಳ ವರದಿ ಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗು ವುದು. ಶಾಲಾ ವಿದ್ಯಾರ್ಥಿಯ ದಾರುಣ ಸಾವಿಗೆ ಕಾರಣವಾದ ಇಲಾಖೆಗಳ ನಿಲುವನ್ನು ಪ್ರತಿಭಟಿಸಿ ಎಬಿವಿಪಿ, ಕೆಎಸ್ಯು ಮತ್ತು ಫೆಟರ್ನಿಟಿ ಎಂಬೀ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಇಂದು ಶಿಕ್ಷಣ ಬಂದ್ ಆಚ ರಿಸಲಾಗುತ್ತಿದೆ. ಎಲ್ಲೆಡೆ ಭಾರೀ ಪ್ರತಿಭಟನೆಗಳೂ ನಡೆಯುತ್ತಿದೆ.
ಮೃತಪಟ್ಟ ಬಾಲಕನ ತಾಯಿ ಸುಜ ವಿದೇಶದಲ್ಲಿ ದುಡಿಯು ತ್ತಿದ್ದು ಅವರು ನಾಳೆ ಊರಿಗೆ ಆಗಮಿಸಿದ ಬಳಿಕವಷ್ಟೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಮಿಥುನ್ ಮನು ನಿನ್ನೆ ಬೆಳಿಗ್ಗೆ ಸಹಪಾಠಿಗಳ ಜೊತೆ ಆಟವಾಡುತ್ತಿದ್ದ ವೇಳೆ ಶಾಲಾ ಕಟ್ಟಡದ ಎದುರುಗಡೆ ನಿರ್ಮಿಸಿದ್ದ ಶೆಡ್ನ ಮೇಲೆ ಸಹಪಾಠಿಯ ಚಪ್ಪಲಿ ಬಿದ್ದಿತ್ತು. ಅದನ್ನು ಮಿಥುನ್ ತೆಗೆಯಲೆತ್ನಿಸಿದಾಗ ಆ ಶೆಡ್ನ ಮೇಲೆ ಹಾದುಹೋಗುತ್ತಿದ್ದ ಹೈಟೆನ್ಶನ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಆತನಿಗೆ ಶಾಕ್ ತಗಲಿದೆ. ತಕ್ಷಣ ಆತನನ್ನು ಶಾಸ್ತಾಂಗೋಟ್ ತಾಲೂಕು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.