ಸಾರಿಗೆ ಕಾನೂನು ಉಲ್ಲಂಘನೆಗೆ ನೋಟೀಸು ವರದಿ ಸಲ್ಲಿಸುವಂತೆ ಸಾರಿಗೆ ಆಯುಕ್ತರಿಗೆ ನಿರ್ದೇಶಿಸಿದ ಸಚಿವ ಗಣೇಶ್ ಕುಮಾರ್
ಕುಂಬಳೆ: ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಂತೆ ಕುಂಬಳೆ ಪರಿಸರದ 400ರಷ್ಟು ಮಂದಿಗೆ ನೋ ಟೀಸು ನೀಡಿದ ಘಟನೆಗೆ ಸಂಬಂಧಿಸಿ ಸಾರಿಗೆ ಇಲಾಖೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಮಧ್ಯಪ್ರವೇಶಿಸಿದ್ದಾರೆ.
ಘಟನೆ ಕುರಿತು ತುರ್ತಾಗಿ ವರದಿ ಸಲ್ಲಿಸುವಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸಚಿವ ನಿರ್ದೇಶ ನೀಡಿದ್ದಾರೆ. ಸಾರಿಗೆ ಕಾನೂನು ಉಲ್ಲಂಘನೆ ಹೆಸರಲ್ಲಿ ಹಲವು ಮಂದಿಗೆ ಏಕ ಕಾಲದಲ್ಲಿ ನೋಟೀಸು ಲಭಿಸಿದ ಬಗ್ಗೆ ಇತ್ತೀಚೆಗೆ ‘ಕಾರವಲ್’ ವರದಿ ಪ್ರಕಟಿಸಿತ್ತು.
ಕುಂಬಳೆ ಪೇಟೆ ಬಳಿಯ ರಸ್ತೆ ಡಿವೈಡರ್ನಲ್ಲಿ 2023ರಲ್ಲಿ ಎ.ಐ. ಕ್ಯಾಮರಾ ಸ್ಥಾಪಿಸಲಾಗಿತ್ತು. ಆದರೆ ಸಾರಿಗೆ ಕಾನೂನು ಉಲ್ಲಂಘನೆ ಹೆಸರಲ್ಲಿ ಯಾರಿಗೂ ನೋಟೀಸು ಲಭಿಸದಿರುವು ದರಿಂದ ಎಐ ಕ್ಯಾಮರಾ ಕಾರ್ಯಾ ಚರಿಸುತ್ತಿ ಲ್ಲವೆಂದೇ ಆ ರಸ್ತೆಯಲ್ಲಿ ಸಂಚರಿಸಿದವರು ಭಾವಿಸಿದ್ದರು. ಆದರೆ 2025 ಜೂನ್ 1ರಿಂದ ಸಾರಿಗೆ ಕಾನೂನು ಉಲ್ಲಂಘನೆ ಹೆಸರಲ್ಲಿ ನೋಟೀಸು ಬರತೊಡಗಿದೆ. 2023 ರಿಂದ ಇದುವರೆಗೆ ನಡೆದ ಸಾರಿಗೆ ಕಾನೂನು ಉಲ್ಲಂಘನೆಗೆ ದಂಡ ಪಾವತಿಸಬೇಕೆಂದು ನೋಟೀಸಿನಲ್ಲಿ ತಿಳಿಸಲಾಗಿದೆ. 10 ಸಾವಿರದಿಂದ 1 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೊತ್ತ ಪಾವತಿಸಲು ನೋಟೀಸಿನಲ್ಲಿ ತಿಳಿಸಲಾಗಿದೆ. ನೋಟೀಸು ಲಭಿಸಿದವರು ಜೂನ್ 2ರಂದು ಬೆಳಿಗ್ಗೆ ಕ್ಯಾಮರಾ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲದೆ ನೋಟೀಸು ಲಭಿಸಿದವರು ಸೇರಿ ವಾಟ್ಸಪ್ ಗ್ರೂಪ್ ರೂಪಿಸಿದ್ದಾರೆ.