ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಎಂಟು ಮಂದಿ ಪೊಲೀಸ್ ಕಸ್ಟಡಿಗೆ: ತೀವ್ರ ವಿಚಾರಣೆ
ಮಂಗಳೂರು: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಿನ್ನಿಪದವಿನ ಸುಹಾಸ್ ಶೆಟ್ಟಿ (36)ಯವರನ್ನು ಮೊನ್ನೆ ರಾತ್ರಿ ಮಾರಕಾಯುಧಗಳಿಂದ ನಡುರಸ್ತೆಯಲ್ಲೇ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪ್ರಕರಣದ ಆರೋಪಿ ಗಳೆಂದು ಶಂಕಿಸಲಾಗುತ್ತಿರುವ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರನ್ನು ತನಿಖಾ ತಂಡ ತೀವ್ರ ವಿಚಾರಣೆಗೊ ಳಪಡಿಸುತ್ತಿದೆ.
ಸುಹಾಸ್ ಶೆಟ್ಟಿ ಕೊಲೆ ಮಾಡಿದ್ದ ಆರೋಪಿಗಳು ತಕ್ಷಣ ಅಲ್ಲಿಂದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ನಂತರ ಆ ಕಾರನ್ನು ಅಲ್ಲೇ ಅಲ್ಪ ದೂರದ ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಕೊಲೆಗೆ ಬಳಸಿದ ಮಾರಕಾಯುಧಗಳನ್ನು ಕಾರಿನಲ್ಲೇ ಬಿಸಾಡಿದ ನಂತರ ಅವರು ಮಂಗಳೂರಿನಲ್ಲಿ ಅವಿತುಕುಳಿತಿದ್ದರು. ಕೊಲೆ ನಡೆದಾಕ್ಷಣದಿಂದ ಆರೋಪಿಗಳ ಪತ್ತೆಗಾಗಿ ಪೊಲೀಸರು ಕ್ಷಿಪ್ರ ತೀವ್ರ ಕಾರ್ಯಾಚರಣೆ ಆರಂಭಿಸಿದ್ದರು. ಅದರ ಫಲವಾಗಿ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಸುಹಾಸ್ ಶೆಟ್ಟಿ ಕೊಲೆಯೊಂದಿಗೆ ಮಂಗಳೂರು ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಭೆಯ ಬಳಿಕವಷ್ಟೇ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡುವ ಸಾಧ್ಯತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೂಡಾ ಮಂಗಳೂರಿಗೆ ಆಗಮಿಸಿದ್ದಾರೆ.
ಕೊಲೆ ನಡೆದ ಸ್ಥಳಕ್ಕೆ ವಿಪಕ್ಷ ನಾಯಕ ಆರ್. ಅಶೋಕ್, ಶಾಸಕರಾದ ಭರತ್ ಶೆಟ್ಟಿ, ಯಶ್ಪಾಲ್ ಸುವರ್ಣ, ವೇದವ್ಯಾಸ ಕಾಮತ್ ನಿನ್ನೆ ಭೇಟಿ ನೀಡಿ ಪರಿಸೀಲಿಸಿದ್ದಾರೆ. ಈ ಕೊಲೆ ಹಿಂದೆ 20 ಮಂದಿಯ ಕೈವಾಡವಿದೆ. ಲೇಡಿ ಡೋನ್ಗಳೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕರು ಸ್ಫೋಟಕ ಆರೋಪ ಮಾಡಿದ್ದಾರೆ. ಸುಹಾಸ್ ಶೆಟ್ಟಿಯವರ ಅಂತ್ಯಕ್ರಿಯೆ ನಿನ್ನೆ ಕಾರಿಂಜದಲ್ಲಿ ನಡೆಸಲಾಯಿತು. ಇದರಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ ಸೇರಿದಂತೆ ಹಲವರು ಭಾಗವಹಿಸಿದರು. ಸುಹಾಸ್ ಶೆಟ್ಟಿಯ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ನೀಡಲಾಗುವುದೆಂದು ಇದೇ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಈ ಕೊಲೆ ಬಗ್ಗೆ ಎನ್ಐಎಯಿಂದ ತನಿಖೆ ನಡೆಸಬೇಕೆಂದೂ ಆಗ್ರಹಪಟ್ಟರು.