ಸೊತ್ತಿಗಾಗಿ 51ರ ಹರೆಯದ ಮಹಿಳೆಯನ್ನು ಮದುವೆಯಾದ 29ರ ಯುವಕ : ಪತ್ನಿಯನ್ನು ವಿದ್ಯುತ್ ಶಾಕ್ ನೀಡಿ ಕೊಲೆ: ಆರೋಪಿಗೆ ಜೀವಾವಧಿ ಕಠಿಣ ಸಜೆ
ತಿರುವನಂತಪುರ: ಸೊತ್ತು ಕಬಳಿಸಲು ೫೧ರ ಹರೆಯದ ಮಹಿಳೆಯನ್ನು ಮದುವೆಯಾಗಿ ಬಳಿಕ ಆಕೆಯನ್ನು ವಿದ್ಯುತ್ ಶಾಕ್ ನೀಡಿ ಕೊಲೆಗೈದ 29ರ ಹರೆಯದ ಪತಿಗೆ ನೆಯ್ಯಾಟಿಂಗರ ಆಡಿಶನಲ್ ಜಿಲ್ಲಾ ಸೆಕ್ಷನ್ಸ್ ನ್ಯಾಯಾಲಯ ಜೀವಾವಧಿ ಕಠಿನ ಸಜೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2020 ಡಿಸೆಂಬರ್ 26ರಂದು ಮುಂಜಾನೆ ಕುನ್ನುತ್ತ್ಕಾಲ್ ವಿಲ್ಲೇಜ್ ತ್ರೇಸ್ಯಪುರದ ಫಿಲೋ ಮಿನಾ ಎಂಬವರ ಪುತ್ರಿ ಶಾಖ ಕುಮಾರಿಯನ್ನು ಬೆಡ್ರೂಮ್ನಲ್ಲಿ ಉಸಿರುಕಟ್ಟಿಸಿ ಪ್ರಜ್ಞೆ ತಪ್ಪಿಸಿದ ಬಳಿಕ ವಿದ್ಯುತ್ ಶಾಕ್ ತಗಲಿಸಿ ಕೊಲೆಗೈಯ್ಯಲಾಗಿತ್ತು. ಮೃತದೇಹವನ್ನು ತಪಾಸಣೆ ನಡೆಸಿದ ವೈದ್ಯರು ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪತಿಯಾದ ಅರುಣ್ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಅನಂತರ ನಡೆಸಿದ ತನಿಖೆಯಲ್ಲಿ ಅರುಣ್ ತಪ್ಪೊಪ್ಪಿಕೊಂಡಿದ್ದನು. ಪತ್ತಾಂಕಲ್ಲು ನಿವಾಸಿಯಾದ ಅರುಣ್ ಶ್ರೀಮಂತ ಳಾದ ಶಾಖ ಕುಮಾರಿಯ ಸೊತ್ತುಗಳನ್ನು ಕಬಳಿಸಲು ಬೇಕಾಗಿ ಆಕೆಯನ್ನು ವಿವಾ ಹವಾಗಿದ್ದನು. ಮದುವೆ ಬೇಡವೆಂದು ನಿರ್ಧರಿಸಿದ ಶಾಖ ಕುಮಾರಿ ಏಕಾಂಗಿಯಾಗಿ ವಾಸಿಸುತ್ತಿದ್ದರು.
ಈ ಮಧ್ಯೆ ಆಕೆ ಮತ್ತು ಅರುಣ್ ಮಧ್ಯೆ ಪ್ರೀತಿ ಹುಟ್ಟಿಕೊಂಡಿತ್ತು. ತನ್ನ ಸೊತ್ತುಗಳಿಗೆ ಹಕ್ಕುದಾರರಾಗಿ ಒಂದು ಮಗು ಬೇಕೆಂಬ ಆಗ್ರಹದಿಂದ ಅರುಣ್ನನ್ನು ಆಕೆ ಮದುವೆಯಾಗಿರುವುದಾಗಿ ಹೇಳಲಾಗುತ್ತಿದೆ. ಮದುವೆಯಾದ ವಿಷಯವನ್ನು ಗುಪ್ತವಾಗಿರಿಸಲು ಅರುಣ್ ಪ್ರಯತ್ನಿಸಿದ್ದನು. ಈ ಮಧ್ಯೆ ಶಾಖ ಕುಮಾರಿಯ ಹಣದಿಂದ ಅರುಣ್ ಕಾರು ಹಾಗೂ ಬೈಕ್ ಖರೀದಿಸಿ ಆಡಂಬರ ಜೀವನ ನಡೆಸ ತೊಡಗಿದನು. ಶಾಖ ಕುಮಾರಿಯ ಸೊತ್ತುಗಳಿಗೆ ಏಕೈಕ ಹಕ್ಕುದಾರನಾಗಲು ಆತ ಮನಃಪೂರ್ವ ಆಕೆಯನ್ನು ಕೊಲೆಗೈದಿರುವುದಾಗಿ ಪತ್ತೆಹಚ್ಚಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.