ಸೌದೆಯಿಂದ ಪತ್ನಿಯ ತಲೆಗೆ ಹೊಡೆದು ಕೊಲೆಗೈದ ಪ್ರಕರಣ :ಆರೋಪಿ ಪತಿಗೆ ಜೀವಾವಧಿ ಸಜೆ, ಜುಲ್ಮಾನೆ

ಕಾಸರಗೋಡು: ಕೌಟುಂಬಿಕ ಕಲಹದ   ವೇಳೆ ಸೌದೆಯಿಂದ ಪತ್ನಿಯ ತಲೆಗೆ ಹೊಡೆದು ಕೊಲೆಗೈದು, ಅದನ್ನು ತಡೆಯಲು ಬಂದ ಮಗಳ ಮೇಲೂ ಗಂಭೀರ ಹಲ್ಲೆ ನಡೆಸಿದ ಪ್ರಕರಣ ಆರೋಪಿ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಾಞರಡ್ಕ ಮೇಲೋತ್ತ್ ವೀಟಿಲ್‌ನ ಗೋಪಾಲಕೃಷ್ಣನ್ (೭೬)ನಿಗೆ  ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಜೀವಾವಧಿ ಸಜೆ  ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು. ಇದರ ಹೊರತಾಗಿ ಪುತ್ರಿ ಮೇಲೆ ಹಲ್ಲೆ ನಡೆಸಿ ದುದಕ್ಕೆ ಸಂಬಂಧಿಸಿ ನ್ಯಾಯಾಲಯ ಆರೋಪಿಗೆ ೧೨ ವರ್ಷ ಸಜೆ ಮತ್ತು ಮೂರು ಲಕ್ಷ ರೂ. ಜುಲ್ಮಾನೆ ವಿಧಿಸಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇ ಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

೨೦೧೯ ಡಿಸೆಂಬರ್ ೩ರಂದು ಸಂಜೆ ಕಾಞರಡ್ಕ ಮೇಲೋತ್ತ್ ವೀಟಿಲ್‌ನ  ದಿ| ಕುಂಞಂಬು ನಾಯರ್-ವರಟ್ಟಿ ದಂಪತಿ  ಪುತ್ರಿಯಾಗಿರುವ ಪತ್ನಿ ಕಲ್ಯಾಣಿ (೪೮)ರನ್ನು ಸೌದೆಯಿಂದ ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ತಾಯಿಗೆ ಹೊಡೆಯುವುದನ್ನು ತಡೆಯಲು ಬಂದ ಮಗಳು ಶರಣ್ಯ (೨೯)ಳ ಮೇಲೂ ಆರೋಪಿ ಹಲ್ಲೆ ನಡೆಸಿದ್ದನು. ಗಂಭೀರ ಗಾಯಗೊಂಡ ಆಕೆ ಹಲವು ದಿನಗಳ ತನಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿಬಂದಿತ್ತು.

ಅಂಬಲತ್ತರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಹೆಚ್ಚುವರಿ ಪಬ್ಲಿಕ್ ಪ್ರೋಸಿ ಕ್ಯೂಟರ್ ಇ. ಲೋಹಿತಾಕ್ಷನ್  ಪ್ರೋಸಿಕ್ಯೂಷನ್ ಪರ ನ್ಯಾಯಾಲ ಯದಲ್ಲಿ ವಾದಿಸಿದ್ದರು.

RELATED NEWS

You cannot copy contents of this page