ಹಲಸಿನಕಾಯಿ ತುಂಡರಿಸುವ ಕತ್ತಿ ಮೇಲೆ ಬಿದ್ದು ಬಾಲಕ ದಾರುಣ ಮೃತ್ಯು
ಬದಿಯಡ್ಕ: ತಾಯಿ ಹಲಸಿನಕಾಯಿ ತುಂಡರಿಸುತ್ತಿದ್ದ ವೇಳೆ ಹಲಗೆಯಲ್ಲಿ ಜೋಡಿಸಿದ ಕತ್ತಿಯ ಮೇಲೆ ಬಿದ್ದು ಪುತ್ರ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬದಿಯಡ್ಕ ಬಳಿಯ ಪಿಲಾಂಕಟ್ಟೆಯ ಆಟೋ ಚಾಲಕ ಅಮೀರ್ ಕೋಳಾರಿ- ಸುಲೈಕಾ ದಂಪತಿಯ ಅವಳಿ ಮಕ್ಕಳಲ್ಲಿ ಓರ್ವನಾದ ಹುಸೈನ್ ಶಹಬಾಸ್ (8) ಮೃತಪಟ್ಟ ದುರ್ದೈವಿಯಾಗಿ ದ್ದಾನೆ. ಬುಧವಾರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ತಾಯಿಯೊಂದಿಗೆ ಆಲಂಪಾಡಿ ಬೆಳ್ಳೂರಡ್ಕದ ಮನೆಗೆ ಹುಸೈನ್ ಶಹಬಾಸ್ ತಲುಪಿದ್ದನು. ತಾಯಿ ಅಡುಗೆ ಕೋಣೆ ಭಾಗದಲ್ಲಿ ಕುಳಿತು ಹಲಸಿನಕಾಯಿ ತುಂಡರಿಸುತ್ತಿದ್ದರು. ಆ ವೇಳೆ ಅಲ್ಲಿಗೆ ಓಡಿ ಬಂದ ಬಾಲಕ ಕತ್ತಿಯ ಮೇಲೆ ಬಿದ್ದಿದ್ದಾನೆ. ಎದೆ ಹಾಗೂ ಸೊಂಟಕ್ಕೆ ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಾಲಕನ ದಾರುಣ ಸಾವಿನಿಂದ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಯಾಗಿದೆ. ಮೃತನು ತಂದೆ, ತಾಯಿ, ಸಹೋದರ ಹಸನ್ ಶಹಬಾಸ್, ಸಹೋದರಿ ಸಹಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಘಟನೆ ಬಗ್ಗೆ ವಿದ್ಯಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.