ಹಾವು ಕಡಿದು ಮೃತಪಟ್ಟ ಮಹಿಳೆಯ ಮನೆಯೊಳಗೆ ವಿಚಿತ್ರ ಘಟನೆ: ನೀರಿದ್ದ ಚೆಂಬಿನ ಸುತ್ತ ಹರಡಿದ ಬೂದಿ ಮೇಲೆ ಹಾವಿನ ಸಂಚಾರ!

ಪೈವಳಿಕೆ: ನಾಗರಹಾವಿನ ಕಡಿತದಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರದ ಬಳಿಕ ಅವರ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಅದು ಕುಟುಂಬ ಹಾಗೂ ಸಂಬಂಧಿಕರಲ್ಲಿ ಆಶ್ಚರ್ಯದ ಜೊತೆಗೆ ಆತಂಕವನ್ನು ಸೃಷ್ಟಿಸಿದೆ.

ಕುರುಡಪದವು ನಿವಾಸಿ ದಿ| ಮಾಂಕು ಎಂಬವರ ಪತ್ನಿ ಚೋಮು (64) ಎಂಬವರು ಬುಧವಾರ ರಾತ್ರಿ ನಾಗರಹಾವು ಕಡಿದು ಸಾವಿಗೀಡಾಗಿ ದ್ದರು. ಮನೆಯೊಳಗೆ ನಿದ್ರಿಸಿದ್ದ ಚೋಮು ಅವರಿಗೆ ರಾತ್ರಿ 12 ಗಂಟೆ ವೇಳೆ ಹಾವು ಕಡಿದಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲು ಸಾಧ್ಯವಾಗಿರಲಿಲ್ಲ. ಚೋಮು ಅವರ ಅಂತ್ಯ ಸಂಸ್ಕಾರ ಗುರುವಾರ ನಡೆಸಲಾಗಿತ್ತು. ಆ ಬಳಿಕ ರಾತ್ರಿ ವೇಳೆ ಸಂಪ್ರದಾಯ ಪ್ರಕಾರ ಮನೆಯ ಚಾವಡಿಯಲ್ಲಿ ಬೂದಿ ಹರಡಿ ಅದರ ಮಧ್ಯೆ ಚೊಂಬಿನಲ್ಲಿ  ನೀರು ಇಡಲಾಗಿತ್ತು. ಮನೆಯ ಬಾಗಿಲುಗಳನ್ನು ಭದ್ರಪಡಿಸಿ ಮನೆ ಮಂದಿ ಸಹಿತ ನಾಲ್ಕು ಮಂದಿ ಜಗಲಿಯಲ್ಲಿ ಮಲಗಿದ್ದರು. ನಿನ್ನೆ ಬೆಳಿಗ್ಗೆ ಎದ್ದು ನೋಡಿದಾಗ ಬೂದಿ ಮೇಲೆ ಹಾವು ಹರಿದ ಗುರುತು ಹಾಗೂ ಚೆಂಬಿನಲ್ಲಿದ್ದ ನೀರು ಅಲ್ಪ ಮುಗಿದಿರುವುದು ಕಂಡು ಬಂದಿದೆ. ಚೋಮು ಅವರಿಗೆ ಕಡಿದ ಹಾವನ್ನು ಗುರುವಾರ ಬೆಳಿಗ್ಗೆ ಹಿಡಿದು ಕೊಂಡೊಯ್ದು ದೂರದ ಅರಣ್ಯದಲ್ಲಿ ಬಿಡಲಾಗಿದೆ. ಅಲ್ಲದೆ ಮನೆಯೊಳಗೆ ಎಲ್ಲೆಡೆ ಹುಡುಕಿ ಬೇರೆ ಹಾವು ಇಲ್ಲವೆಂದು ಖಚಿತಪಡಿಸಲಾಗಿತ್ತು. ಆದರೆ ಬೂದಿಯ ಮೇಲೆ ಹಾವಿನ ಸಂಚಾರ ಗುರುತು ಕಂಡು ಬಂದಿರುವುದಾದರೂ ಹೇಗೆ? ಎಂದು ತಿಳಿಯುತ್ತಿಲ್ಲ. ಎಂದು ಚೋಮು ಅವರ ಸಂಬಂಧಿಕ ಕುರುಡಪದವಿನ ಸತೀಶ್ ತಿಳಿಸಿದ್ದಾರೆ. ಚೋಮು ಅವರ ಅಕಾಲಿಕ ಸಾವಿನಿಂದ ಕುಟುಂಬ, ಸಂಬಂಧಿಕರು  ದುಃಖದಲ್ಲಿರುವಾಗ ಇದೀಗ ಕಂಡು ಬಂದ ವಿಚಿತ್ರ ಘಟನೆ ಆಶ್ಚರ್ಯದ ಜೊತೆಗೆ ಆತಂಕವನ್ನೂ ಹುಟ್ಟಿಸಿದೆ.

Leave a Reply

Your email address will not be published. Required fields are marked *

You cannot copy content of this page