ಹೊಸದಾಗಿ ಆರಂಭಿಸುವ ಅಂಗಡಿಯಲ್ಲಿ ಕೆಲಸನಿರತನಾಗಿದ್ದ ಯುವಕನಿಗೆ ಇರಿತ: ಓರ್ವ ಕಸ್ಟಡಿಗೆ

ಕಾಸರಗೋಡು: ಹೊಸದಾಗಿ ಆರಂಭಿಸಲಾಗುವ ಅಂಗಡಿಯ ಪೈಂಟಿಂಗ್ ಕೆಲಸದಲ್ಲಿ ನಿರತನಾಗಿದ್ದ ಯುವಕನೋರ್ವನನ್ನು ಅಕ್ರಮಿಯೋರ್ವ ಇರಿದು ಗಾಯಗೊಳಿಸಿದ ಘಟನೆ ಕೂಡ್ಲು ಮೀಪುಗುರಿಯಲ್ಲಿ ಇಂದು ಮುಂಜಾನೆ ನಡೆದಿದೆ. ಕೂಡ್ಲು ಎರಿಯಾಲ್ ನಿವಾಸಿ ಬಾಸಿತ್ (25) ಇರಿತಕ್ಕೊಳಗಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಘಟನೆ ವೇಳೆ ಪ್ರಸ್ತುತ ಅಂಗಡಿಯಲ್ಲಿದ್ದ ಕೂಡ್ಲು ಎರಿಯಾಲ್ ಬ್ಲಾರ್ಕೋಡ್ ಹೌಸ್‌ನ ಮೊಹಮ್ಮದ್ ಅಸೀಫ್ ಸಹೀರ್ (22) ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಈ ಬಗ್ಗೆ ನರಹತ್ಯಾಯತ್ನ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇರಿದನೆಂದು ಆರೋಪಿಸಲಾ ಗುತ್ತಿರುವ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ನಾನು ಮತ್ತು ನನ್ನ ಸ್ನೇಹಿತ ಬಾಸಿತ್ ಸೇರಿ ಮೀಪುಗುರಿಯಲ್ಲಿ ಹೊಸ ಅಂಗಡಿಯೊಂದನ್ನು ಆರಂಭಿಸಲು ತೀರ್ಮಾನಿಸಿದ್ದು, ಅದರಂತೆ ಆ ಅಂಗಡಿಯ ಪೈಂಟಿಂಗ್ ಕೆಲಸ ನಿನ್ನೆ ರಾತ್ರಿಯಿಂದ ನಡೆಸಲಾಗುತ್ತಿತ್ತು. ಇಂದು ಮುಂಜಾನೆ ಯುವಕನೋರ್ವ ಅಲ್ಲಿಗೆ ಬಂದು ಅಂಗಡಿ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಚಾಕುವಿನಿಂದ ನನ್ನ ಸ್ನೇಹಿತ ಬಾಸಿತ್‌ನತ್ತ ಬೀಸಿದನೆಂದೂ, ಆಗ ಅದನ್ನು ನಾನು ತಡೆದಾಗ ಅದು ಬಾಸಿತ್‌ನ ಎಡ  ಕೈಗೆ ತಗಲಿ ಗಂಭೀರ ಗಾಯ ಉಂಟಾಯಿತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೊಹಮ್ಮದ್ ಅಸೀಫ್ ಸಹೀರ್ ಆರೋಪಿಸಿದ್ದಾನೆ.

You cannot copy contents of this page