ಪಾಲಕ್ಕಾಡ್: ಹಣ ಕೇಳಿ ನೀಡದ ಹಿನ್ನೆಲೆಯಲ್ಲಿ ತಂದೆಯ ಸಹೋದರಿಯನ್ನು ಯುವಕ ಕಡಿದು ಕೊಲೆಗೈದ ಘಟನೆ ನಡೆದಿದೆ. ಮಣ್ಣಾರಕಾಡ್ ಚೆರುಕುಳಂ ಕರಿಂಬನ್ಕುನ್ನ್ ಬುಡಕಟ್ಟು ಉನ್ನತಿಯ ಮಾಧವಿ ಕುಟ್ಟಿ ಮೃತಪಟ್ಟ ಮಹಿಳೆ. ಕೊಲೆಕೃತ್ಯ ನಡೆಸಿದ ಬಳಿಕ ಆರೋಪಿ ಶಶಿ (42) ಮಣ್ಣಾರ್ಕಾಡ್ ಪೊಲೀಸ್ ಠಾಣೆಗೆ ತಲುಪಿ ಶರಣಾಗತನಾಗಿದ್ದಾನೆ. ನಿನ್ನೆ ಮಧ್ಯಾಹ್ನ ಈ ಧಾರುಣ ಘಟನೆ ನಡೆದಿದೆ. ಮಾಧವಿಯ ಕುತ್ತಿಗೆಗೆ ಶಶಿ ಕಡಿದಿದ್ದನು. ಗಂಭೀರ ಗಾಯಗೊಂಡ ಆಕೆಯನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಇವರಿಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಶಶಿ ಮಾಧವಿ ಕುಟ್ಟಿಯವರಲ್ಲಿ ಹಣ ಆಗ್ರಹಿಸಿದ್ದನು. ಆದರೆ ಅವರು ನೀಡದ ಹಿನ್ನೆಲೆಯಲ್ಲಿ ದ್ವೇಷದಿಂದ ಆಕ್ರಮಿಸಲು ಕಾರಣವೆನ್ನಲಾಗಿದೆ. ಆರೋಪಿ ಶಶಿಗೆ ಮಾನಸಿಕ ಸಮಸ್ಯೆಗಳಿರುವುದಾಗಿಯೂ ಸಂಬಂಧಿಕರು ತಿಳಿಸಿದ್ದಾರೆ.






