ಅಂಬೇಡ್ಕರ್ ಗ್ರಾಮ ಅಭಿವೃದ್ಧಿಯಲ್ಲಿ ಪುಳಿಕುತ್ತಿ ಎಸ್.ಸಿ. ಕಾಲನಿಗೆ ಒಂದು ಕೋಟಿ ರೂ. ಮಂಜೂರು: ಅಭಿವೃದ್ಧಿ ಕೆಲಸ ಆಮೆನಡಿಗೆಯಲ್ಲಿ

ಕಾಲನಿ ನಿವಾಸಿಗಳ ಆರೋಪ

ಉಪ್ಪಳ: ಮಂಜೇಶ್ವರ ವಿಧಾನಸಭಾ ಮಂಡಲದ ಮಂಗಲ್ಪಾಡಿ ಪಂಚಾಯತ್‌ನ ಪುಳಿಕುತ್ತಿ ಎಸ್.ಸಿ. ಕಾಲನಿ ಅಭಿವೃದ್ಧಿಗೆ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಒಂದು ಕೋಟಿ ರೂ.ಮಂಜೂರುಗೊಂಡಿತ್ತು. ಕಾಲನಿ ಅಭಿವೃದ್ಧಿಗೆ ಶಾಸಕ ಎ.ಕೆ.ಎಂ. ಅಶ್ರಫ್‌ರ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ತಿಗೊಳ್ಳದೆ ಆಮೆನಡಿಗೆಯಲ್ಲಿ ಸಾಗುತ್ತಿರುವುದರಿಂದ ಕಾಲನಿ ನಿವಾಸಿಗಳು ಶಾಸಕರಿಗೆ ದೂರು ನೀಡಿದ್ದಾರೆ. ಇದರಂತೆ ಶನಿವಾರ ಇಂಜಿನಿಯರ್ ಸಹಿತ ಅಧಿಕಾರಿಗಳ ತಂಡ ಕಾಲನಿಗೆ ತಲುಪಿ ಪರಿಶೀಲನೆ ನಡೆಸಿ ಶೀಘ್ರ ಪೂರ್ತಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಯೋಜನೆಯಲ್ಲಿ ೩೨ ಮನೆಗಳ ನವೀಕರಣ, ದಾರಿದೀಪ, ರಸ್ತೆ ಕಾಂಕ್ರೀಟ್, ನೀರಿನ ವ್ಯವಸ್ಥೆ ಸಹಿತ ಇತರ ಹಲವು ಕೆಲಸಗಳನ್ನು ಸೇರಿಸಲಾಗಿತ್ತು. ಕಾಲನಿಗೆ ಕಾಸರಗೋಡು ಜಿಲ್ಲಾ ಡೆವಲಪ್‌ಮೆಂಟ್ ಆಫೀಸರ್ ರವಿರಾಜ್ ಕೆ.ವಿ, ಮಂಜೇಶ್ವರ ಎಸ್.ಸಿ.ಡಿ.ಒ ತಿರುಮಲೇಶ್, ಪಿ.ಕೆ. ಪ್ರೊಜೆಕ್ಟ್ ಇಂಜಿನಿಯರ್ ಪಿ.ಆರ್. ಸುಂದರೇಶ್, ಇಂಜಿನಿಯರ್‌ಗಳಾದ ಸುಜಿತ್ ಸಿ.ಕೆ, ಸುಜಿತ್ ಕುಮಾರ್, ಮಂಗಲ್ಪಾಡಿ ಪ್ರಮೋಟರ್ ಸುಮಲತ, ಪುಳಿಕುತ್ತಿ ಎಸ್.ಸಿ. ಕಾಲನಿ ಪ್ರತಿನಿಧಿಗಳಾದ ದಿನೇಶ್, ಪ್ರಮೋದ್ ಟೀಚರ್, ಹಿರಿಯ ಕಾಂಗ್ರೆಸ್ ನೇತಾರ ಮೊಹಮ್ಮದ್ ಸೀಗಂದಡಿ ಭೇಟಿ ನೀಡಿದರು.

Leave a Reply

Your email address will not be published. Required fields are marked *

You cannot copy content of this page