ಕೂಲಿ ಕಾರ್ಮಿಕ ಕೆರೆಗೆ ಹಾರಿ ಆತ್ಮಹತ್ಯೆ

ಉಪ್ಪಳ: ಕೂಲಿಕಾರ್ಮಿಕ ನೋರ್ವ ವ್ಯಕ್ತಿಯೊಬ್ಬರ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಡಂಬಾರು ಶ್ರೀ ವಿಷ್ಣುಮೂರ್ತಿ ಕ್ಷೇತ್ರ ಸಮೀಪದಲ್ಲಿರುವ ಪತ್ನಿ ಮನೆಯಲ್ಲಿ ವಾಸಿಸುವ ಕರ್ನಾಟಕ ಪಜೀರ್ ನಿವಾಸಿ ಜಯಂತ (೬೦) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಸಂಜೆ ಕಡಂಬಾರು ಧರ್ಮೆಮಾರ್ ಎಂಬಲ್ಲಿನ  ವ್ಯಕ್ತಿಯೊಬ್ಬರ ತೋಟದ ಕೆರೆಗೆ ಹಾರಿದ್ದಾರೆ. ಕೆರೆಗೆ ಹಾರಿದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ತಲುಪಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಉಪ್ಪಳದಿಂದ ಅಗ್ನಿಶಾಮಕದಳ ಹಾಗೂ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಕೆರೆಯಿಂದ ಜಯಂತರನ್ನು ಮೇಲಕ್ಕೆತ್ತಿದರೂ ಅಷ್ಟರೊಳಗೆ ಅವರು ಮೃತಪಟ್ಟಿದ್ದರು. ಘಟನೆ ತಿಳಿದು ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಸಹಿತ ಹಲವರು ಸ್ಥಳಕ್ಕೆ ತಲುಪಿದರು.

ಜಯಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು ಪತ್ನಿ ಗಿರಿಜ, ಮಕ್ಕಳಾದ ಸುಜಾತ, ಸುಮಲತ, ಶಶಿಕಾಂತ್, ಅಳಿಯ ಸೊಸೆಯಂದಿರಾದ ಸುಧಾಕರ, ಕಿಶೋರ್, ಮೀನಾಕ್ಷಿ, ಸಹೋದರ ಜಯರಾಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page