ಮಸೀದಿ ಕಟ್ಟಡದಿಂದ ಬಿದ್ದು ಗಾಯಗೊಂಡ ಕಾರ್ಮಿಕ ಮೃತ್ಯು
ಕಾಸರಗೋಡು: ಮಸೀದಿಯ ಕಟ್ಟಡಕ್ಕೆ ಬಣ್ಣ ಬಳಿಯುವ ಕೆಲಸದಲ್ಲಿ ನಿರತನಾಗಿದ್ದ ವೇಳೆ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಕಾರ್ಮಿಕ ಮೃತಪಟ್ಟರು.
ಚೆಂಗಳ ಕಲ್ಲುಂಕೂಟ್ಟಂ ಅಡಿಯಾತೊಟ್ಟಿಯ ಎ.ಟಿ. ರಸಾಕ್ (೪೭) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಎಪ್ರಿಲ್ ೧೬ರಂದು ದುರ್ಘಟನೆ ಸಂಭವಿಸಿತ್ತು. ಪೈಂಟಿಂಗ್ ಕೆಲಸ ವೇಳೆ ರಸಾಕ್ ಅಪಸ್ಮಾರ ಬಾಧಿಸಿ ಕೆಳಕ್ಕೆ ಬಿದ್ದಿರುವುದಾಗಿ ಅವರ ಜೊತೆ ಕೆಲಸ ನಿರ್ವಹಿಸುತ್ತಿದ್ದವರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ರಸಾಕ್ರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ.
ದಿ| ಎ.ಟಿ. ಅಬ್ದುಲ್ ರಹ್ಮನ್-ಜಮೀಲ ದಂಪತಿಯ ಪುತ್ರನಾದ ಮೃತರು ಪತ್ನಿ ಖಮರುನ್ನೀಸ, ಮಕ್ಕಳಾದ ರಿಸ್ವಾನ್, ಸಫ್ವಾನ್, ಆದಿಲ್, ಸಹೋದರ-ಸಹೋದರಿಯರಾದ ಮಹಮ್ಮದ್ ಕುಂಞಿ, ನಾಸರ್, ರಿಯಾಸ್, ಗಫೂರ್, ಬದರುದ್ದೀನ್, ಫಿರೋಸ್, ಬೀಫಾತ್ತಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.