16ರ ಹರೆಯದ ಬಾಲಕಿ ರಕ್ತಸ್ರಾವದಿಂದ ಸಾವು: ಗರ್ಭ ಛಿದ್ರಕ್ಕೆ ಔಷಧಿ ನೀಡಿರುವುದಾಗಿ ಸಂಶಯ: ತನಿಖೆ ಆರಂಭ

ಕಾಸರಗೋಡು: ಹದಿನಾರರ ಹರೆಯದ ಬಾಲಕಿ ಅಪರಿಮಿತ ರಕ್ತಸ್ರಾವದಿಂದ ಮೃತಪಟ್ಟ ಘಟನೆ ನಡೆದಿದೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯರಾತ್ರಿ ವೇಳೆ ರಕ್ತಸ್ರಾವ ಉಂಟಾದ ಬಾಲಕಿಯನ್ನು ಮೊದಲು ಪರಪ್ಪದ ವೈದ್ಯರೊಬ್ಬರ ಬಳಿಗೆ ಕರೆದೊಯ್ಯಲಾಗಿದೆ. ವೈದ್ಯ ನೀಡಿದ ಸೂಚನೆಯಂತೆ ಬಳಿಕ ಕಾಞಂಗಾಡ್‌ನ ಆಸ್ಪತ್ರೆಗೆ ತಲುಪಿಸಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆಯಲ್ಲಿ ಗರ್ಭಿಣಿಯೆಂದೂ ಆಕೆ ಗಂಭೀರ ಸ್ಥಿತಿಯಲ್ಲಿರುವುದಾಗಿ ತಿಳಿದು ಬಂದಿದೆ. ಇದರಿಂದ ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲು ವೈದ್ಯರು ತಿಳಿಸಿದ್ದಾರೆ. ಇದರಂತೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದಂತೆ ಬಾಲಕಿ ಮೃತಪಟ್ಟಿದ್ದಾಳೆ.

ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ. ಘಟನೆಗೆ ಸಂಬಂಧಿಸಿ ವೆಳ್ಳರಿಕುಂಡ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಗರ್ಭಧರಿಸಲು ಕಾರಣ ಯಾರು ಎಂದು ತಿಳಿಯಲು ತನಿಖೆ ಆರಂಭಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಗರ್ಭ ಛಿದ್ರಗೊಳಿಸಲು ಯಾರಾದರೂ ಔಷಧಿ ನೀಡಿರುವುದು ರಕ್ತಸ್ರಾವಕ್ಕೆ ಕಾರಣವಾಗಿರಬಹುದೇ  ಎಂಬ ಸಂಶಯ ಹುಟ್ಟಿಕೊಂಡಿದೆ. ಈ ಕುರಿತಾಗಿಯೂ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page