ರಾಜ್‌ಮೋಹನ್ ಉಣ್ಣಿತ್ತಾನ್ 50,000ಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ- ಡಿಸಿಸಿ ನಾಯಕತ್ವ ಸಭೆ

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ 50,000ಕ್ಕೂ ಹೆಚ್ಚು ಮತದ ಅಂತರದಲ್ಲಿ ಜಯಿಸುವರೆಂದು ಕಾಸರಗೋಡು ಡಿಸಿಸಿ ನಾಯಕತ್ವ ಸಭೆ ಅಭಿಪ್ರಾಯಪಟ್ಟಿದೆ. ಕೇಂದ್ರ ಸರಕಾರದ ಕೋಮು ವಿರುದ್ಧ ನಿಲುವು, ಭ್ರಷ್ಟಾಚಾರ ಹಾಗೂ ರಾಜ್ಯ ಸರಕಾರದ ದುಂದುವೆಚ್ಚ ಭ್ರಷ್ಟಾಚಾರ ಮೊದಲಾದವು ರಾಜ್ ಮೋಹನ್ ಉಣ್ಣಿತ್ತಾನ್‌ರ ವಿಜಯಕ್ಕೆ ಕಾರಣವಾಗಲಿದೆ ಎಂದು ಸಭೆ ಅಭಿ ಪ್ರಾಯಪಟ್ಟಿದೆ. ಡಿಸಿಸಿ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಕೆಪಿಸಿಸಿ ಸದಸ್ಯರು, ಡಿಸಿಸಿ ಪದಾಧಿಕಾರಿಗಳು, ಬ್ಲೋಕ್ ಮಂಡಲ ಅಧ್ಯಕ್ಷರು, ಪಂಚಾಯತ್ ಮುಖಂಡರು ಭಾಗವಹಿಸಿದರು.

ಜಿಲ್ಲೆಯಲ್ಲಿ  ಪ್ಲಸ್ ಟುವಿಗೆ ೧೫ ಶೇಕಡಾ ಸೀಟುಗಳು ಹೆಚ್ಚಿಸಲಾಗುವುದೆಂಬ ಸರಕಾರದ ನೀತಿ ಕ್ರೂರತೆಯೆಂದು ಡಿಸಿಸಿ ಸಭೆ ಅಭಿಪ್ರಾಯಪಟ್ಟಿದೆ. ಪ್ಲಸ್ ಟುವಿಗೆ ಅಗತ್ಯವಿರುವ ಹೊಸ ಡಿವಿಶನ್‌ಗಳನ್ನು ಮಂಜೂರು ಮಾಡಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಕರ್ಯ ಉಂಟುಮಾಡಬೇಕೆಂದು ಸಭೆ ಆಗ್ರಹಿಸಿದೆ. ಎಸ್‌ಎಸ್‌ಎಲ್‌ಸಿ, ಪ್ಲಸ್‌ಟು ಪರೀಕ್ಷೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳನ್ನು ಡಿಸಿಸಿ ನಾಯಕತ್ವ ಸಭೆ ಅಭಿನಂದಿಸಿದೆ. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯನ್ ಉದ್ಘಾಟಿಸಿದರು. ಮುಖಂಡರಾದ ಕೆ.ಪಿ. ಕುಂಞಿಕಣ್ಣನ್, ಹಕೀಂ ಕುನ್ನಿಲ್, ಎ. ಗೋವಿಂದನ್ ನಾಯರ್, ರಮೇಶನ್ ಕರ್ವಚ್ಚೇರಿ, ಕೆ. ನೀಲಕಂಠನ್ ಸಹಿತ ಹಲವರು ಭಾಗವಹಿಸಿದರು.

You cannot copy contents of this page