ಕಾಸರಗೋಡು: ಕೇರಳದಲ್ಲಿ ರೈಲುಗ ಳನ್ನು ಕೇಂದ್ರೀಕರಿಸಿ ಕಳವು ನಡೆಸುತ್ತಿದ್ದ ತಂಡದ ಇಬ್ಬರನ್ನು ರೈಲ್ವೇ ಭದ್ರತಾ ಪಡೆ (ಆರ್ಪಿಎಫ್)ನ ವಿಶೇಷ ತಂಡ ಪತ್ತೆ ಹಚ್ಚಿ ಬಂಧಿಸಿದೆ.
ಉತ್ತರ ಪ್ರದೇಶ ಮಿಝಾಪುರ್ ನಿವಾಸಿ ಗಳಾದ ಅಭಯ್ ರಾಜ್ ಸಿಂಗ್ (೨೬) ಮತ್ತು ಹರಿಶಂಕರ್ ಗಿರಿ (೨೫) ಬಂಧಿತರಾದ ಆರೋಪಿಗಳು. ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬ್ಯಾಗ್ಗಳಿಂದ ಕಳವು ಗೈಯ್ಯಲಾದ ೧೬ ಪವನ್ ಚಿನ್ನದ ಒಡವೆಗಳನ್ನು ಇವರಿಂದ ಆರ್ಪಿಎಫ್ ವಶಪಡಿಸಿ ಕೊಂಡಿದೆ. ಸೆಪ್ಟಂಬರ್ ೨ರಂದು ನಿಝಾಮು ದ್ದೀನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಣಿಸುತ್ತಿದ್ದ ಯುವತಿ ಯೋರ್ವೆಯ ಚಿನ್ನದ ಕಾಲ್ಗೆಜ್ಜೆ ಕಳವುಗೈಯ್ಯಲ್ಪಟ್ಟಿತ್ತು. ಅದಾದ ಮರುದಿನ ಒಗಾ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಎರ್ನಾಕುಳಂ ಮಾರಾಟ್ ನಿವಾಸಿಯಾದ ಮಹಿಳೆಯೋರ್ವೆಯ ಚಿನ್ನದ ಕಾಲ್ಗೆಜ್ಜೆಯೂ ನಷ್ಟಗೊಂಡಿತ್ತು. ಕಳವುಗೈದ ಆರೋಪಿಗಳ ಬಗ್ಗೆ ಆ ಇಬ್ಬರು ಯುವತಿಯರು ಕೆಲವೊಂದು ಮಾಹಿತಿ ನೀಡಿದ್ದರು. ಅದರ ಆಧಾರ ದಲ್ಲಿ ಕಾಯಂಕುಳಂ ರೈಲು ನಿಲ್ದಾಣದ ಸಿಸಿ ಟಿವಿಗಳ ದೃಶ್ಯಗಳನ್ನು ಆರ್ಪಿ ಎಫ್ ಪರಿಶೀಲಿಸಿದಾಗ ಅದರಲ್ಲಿ ಆರೋಪಿಗಳ ಗುರುತು ಪತ್ತೆಯಾಗಿತ್ತು. ಈ ಮಧ್ಯೆ ಮಂಗಳೂರಿನಲ್ಲಿ ರೈಲಿನೊಳ ಗಿನಿಂದ ಇನ್ನೊಂದು ಕಳವು ನಡೆದಿದೆ. ಆ ಕಳ್ಳತನ ನಡೆಸಿದ ಕಳ್ಳರ ತಂಡ ಬೇರೆಯೇ ಆಗಿದೆ ಎಂದೂ ಅವರ ಬಗ್ಗೆಯೂ ಕೆಲವೊಂದು ಸ್ಪಷ್ಟ ಮಾಹಿತಿಗಳು ಲಭಿಸಿವೆ. ಅವರನ್ನು ಶೀಘ್ರ ಸೆರೆ ಹಿಡಿಯಲು ಸಾಧ್ಯ ವಾಗಲಿದೆ ಎಂಬ ನಿರೀಕ್ಷೆಯನ್ನು ಆರ್ಪಿ ಎಫ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಆರೋಪಿಗಳು ಕಳವಿಗೆ ಬರುವುದೂ, ಹಿಂತಿರುಗುವುದೂ ವಿಮಾನದಲ್ಲಿ
ಆರ್ಪಿಎಫ್ ಬಂಧಿಸಿದ ಆರೋಪಿಗಳಾದ ಅಭಯ್ರಾಜ್ ಸಿಂಗ್ ಮತ್ತು ಹರಿಶಂಕರ್ ಗಿರಿ, ಕಳವು ನಡೆಸಲು ಉತ್ತರ ಪ್ರದೇಶದಿಂದ ವಿಮಾನದಲ್ಲಿ ನೇರವಾಗಿ ಗೋವಾಕ್ಕೆ ಬರುತ್ತಿದ್ದರು. ಅಲ್ಲಿಂದ ಅವರು ರೈಲಿನಲ್ಲಿ ಕೇರಳಕ್ಕೆ ಬಂದು ಕಳವು ನಡೆಸುತ್ತಿದ್ದರು. ಕಳವು ನಡೆಸಿದ ಬಳಿಕ ಕದ್ದ ಮಾಲುಗಳೊಂದಿಗೆ ಮತ್ತೆ ರೈಲಿನಲ್ಲಿ ಗೋವಾಕ್ಕೆ ಹೋಗಿ ನಂತರ ಅಲ್ಲಿಂದ ಅವರು ವಿಮಾನದಲ್ಲಿ ಉತ್ತರ ಪ್ರದೇಶಕ್ಕೆ ಹಿಂತಿರುಗುತ್ತಿದ್ದರೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಆರ್ಪಿಎಫ್ ತಿಳಿಸಿದೆ. ಇಂತಹ ಹಲವು ತಂಡಗಳು ಕೇರಳದಲ್ಲಿ ಕಾರ್ಯವೆಸಗುತ್ತಿವೆ. ಆದ್ದರಿಂದ ಜಾಲದ ಇನ್ನೂ ಹಲವರು ಸಿಕ್ಕಿ ಬೀಳುವ ಸಾಧ್ಯತೆ ಇದೆ ಎಂದೂ ಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.







