ಕಾರಿನಲ್ಲಿ ಸಾಗುತ್ತಿದ್ದ ತಂಡ ಸೆರೆ : ಚಾಕು ವಶಕ್ಕೆ; ಇಬ್ಬರು ಪರಾರಿ

ಕಾಸರಗೋಡು: ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ನಗರದ ಅಶೋಕನಗರದಲ್ಲಿ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ  ಕಾರಿನಲ್ಲಿ ತಿರುಗಾಡುತ್ತಿದ್ದ ಮೂವರನ್ನು  ಸೆರೆಹಿಡಿದಿದ್ದಾರೆ. ಆ ವೇಳೆ ಅದೇ ಕಾರಿನ ಜತೆ ಬೈಕ್‌ನಲ್ಲಿ ಬರುತ್ತಿದ್ದ  ಇಬ್ಬರು ಪೊಲೀಸರ ಕೈಗೆ ಸಿಲುಕದೆ ಪರಾರಿಯಾಗಿದ್ದಾರೆ.

ಬಂಧಿತರ ಕೈಯಿಂದ ಚಾಕು ಇತ್ಯಾದಿ ಮಾರಕಾಯುಧಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ತಳಂಗರೆ ಬಾಂಗೋಡು ನಿವಾಸಿ ಮನಾಫ್ (೪೨), ತಳಂಗರೆ ತೆರುವತ್ ನಿವಾಸಿಗಳಾದ ಶಕೀಲ್ ಖಾನ್ (೩೭) ಮತ್ತು   ತಳಂಗರೆ  ಮೊಹಮ್ಮದ್ ಹನೀಫಾ (೨೫) ಎಂಬವರು ಬಂಧಿತರಾದವರು. ಬೈಕ್‌ನಲ್ಲಿ ಪರಾರಿಯಾದ ಇಬ್ಬರ ಬಗ್ಗೆ ಶೋಧ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ನಿನ್ನೆ ಎರಡು ತಂಡಗಳ ಮಧ್ಯೆ ಪರಸ್ಪರ ಜಗಳವುಂಟಾಗಿತ್ತು. ಬಳಿಕ ಅದು ಅಲ್ಲಿಗೇ ಕೊನೆಗೊಂಡಿತು.  ಆಬಗ್ಗೆ  ಲಭಿಸಿದ ಮಾಹಿತಿಯಂತೆ ಪೊಲೀಸರು ತನಿಖೆ ನಡೆಸಿದಾಗ ಜಗಳವಾಡಿದ ಒಂದು ತಂಡ  ವಾಹನದಲ್ಲಿ ಅಶೋಕನಗರದತ್ತ ಸಾಗಿರುವ ಮಾಹಿತಿ ಲಭಿಸಿದೆ. ಅದರಂತೆ ಪೊಲೀಸರು ಅಲ್ಲಿಗೆ ಸಾಗಿ ಆ ಕಾರಿನಲ್ಲಿದ್ದ ಮೂವರನ್ನು ಸೆರೆಹಿಡಿದು ಕಾರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page