ಹೃದಯ ಬದಲಾವಣೆ ವೆಚ್ಚ ಭರಿಸಲು ನಾಡು ಸಿದ್ಧವಾದಾಗ ಮಣಿಪ್ರಸಾದ್ ನಿಧನ

ಕಾಸರಗೋಡು: ಹೃದಯ ಶಸ್ತ್ರಚಿಕಿತ್ಸೆಗಾಗಿ ಊರಿನವರೆಲ್ಲಾ ಜೊತೆಗೂಡಿದರೂ ಮಣಿ ಪ್ರಸಾದ್‌ರ ನಿಧನ ಸಂಭವಿಸಿದೆ. ಹೃದಯದ ವಾಲ್ವ್‌ಗೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಚೆಮ್ಮನಾಡು ಆಲಿಚ್ಚೇರಿ ಎರಿಂಞಿಕಾಲ್‌ನ ಎ. ಮಣಿಪ್ರಸಾದ್ (42) ಮೃತಪಟ್ಟ ಯುವಕ.

ಇವರು ಕೊಲ್ಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಧ್ಯೆ ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆ ಯಲ್ಲಿ ಹೃದಯದ ವಾಲ್ವ್‌ಗೆ ತೊಂದರೆ ಇರುವುದನ್ನು ಪತ್ತೆಹಚ್ಚಲಾಗಿತ್ತು. ಅಲ್ಲಿ ಹಲವು ಕಾಲ ಚಿಕಿತ್ಸೆ ಮುಂದುವರಿಸಿ ದರೂ ರೋಗ ವಾಸಿಯಾಗದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಊರಿಗೆ ತಲುಪಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಿದ್ದರು.  ಲಕ್ಷಾಂತರ ರೂ. ವೆಚ್ಚ ಮಾಡಿ ಚಿಕಿತ್ಸೆ ನಡೆಸಿದ್ದು, ಈ ಮಧ್ಯೆ ಹೃದಯ ಬದಲಾವಣೆ ಮಾಡಬೇಕೆಂದು ವೈದ್ಯರು ನಿರ್ದೇಶಿಸಿದ್ದರು. ಅದಕ್ಕಾಗಿ ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕೊಂಡೊಯ್ಯಲಾಗಿತ್ತು. ಲಕ್ಷಾಂತರ ರೂ. ವೆಚ್ಚ ಮಾಡಿ ಒಂದಕ್ಕಿಂತಲೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿತ್ತು. ಈ ಚಿಕಿತ್ಸಾ ವೆಚ್ಚವನ್ನು ಕುಟುಂಬಕ್ಕೆ ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇವರಿಗೆ ಸಹಾಯ ಮಾಡಲು ಜನಪ್ರತಿನಿಧಿಗಳು, ಸ್ಥಳೀಯರು ಸೇರಿ ಚಿಕಿತ್ಸಾ ಸಹಾಯ ಸಮಿತಿ ರೂಪೀಕರಿಸಿದ್ದರು. ಹೃದಯ ಬದಲಾವಣೆಗೆ ಅಗತ್ಯವಾದ 40 ಲಕ್ಷ ರೂ. ಸಂಗ್ರಹಿಸುವುದಕ್ಕಿರುವ ಚಟುವಟಿಕೆಯಲ್ಲಿ ಇರುವ ಮಧ್ಯೆ ಮಣಿಪ್ರಸಾದ್ ನಿಧನ ಹೊಂದಿದ್ದಾರೆ.

ಮೃತರು ತಂದೆ ಭಾಸ್ಕರನ್ ನಾಯರ್, ತಾಯಿ ಲಕ್ಷ್ಮಿ ಅಮ್ಮ, ಪತ್ನಿ ರಾಜೇಶ್ವರಿ ನೀಲೇಶ್ವರ, ಮಕ್ಕಳಾದ ಸಾಧಿಕ, ಸಾಯಿಕೃಷ್ಣ,  ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page