ಪ್ರೊ. ಎ. ಶ್ರೀನಾಥ್ರಿಗೆ ಕಯ್ಯಾರ ಪ್ರಶಸ್ತಿ ಪ್ರದಾನ 18ರಂದು
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ, ಜನಪದ ತಜ್ಞ, ಯಕ್ಷಗಾನ ಗೊಂಬೆಯಾಟ ಕಲಾವಿದ ಪ್ರೊ. ಎ. ಶ್ರೀನಾಥ್ರನ್ನು ಕಯ್ಯಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಕಯ್ಯಾರು, ಕಯ್ಯಾರು ಕುಟುಂಬಶ್ರೀ ಘಟಕದ ಸಹಯೋಗ ದಲ್ಲಿ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಈ ತಿಂಗಳ 18ರಂದು ಬೆಳಿಗ್ಗೆ 9ರಿಂದ ನಡೆಯುವ ನಾಡೋಜ ಡಾಕ್ಟರ್ ಕಯ್ಯಾರ ಕಿಂಞಣ್ಣ ರೈ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಚಿಂತಕ, ಸಂಘಟಕ, ಸಮಾಜಸೇವಕರಾಗಿ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಸಂಘಟನೆಗಳಲ್ಲಿ ಶ್ರೀನಾಥ್ ಸಕ್ರಿಯರಾಗಿದ್ದು, ಮೂರು ದಶಕಗಳ ಕಾಲ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ರಾಗಿದ್ದರು. ಎನ್ಎಸ್ಎಸ್ ಯೋಜನೆಯ ಶಿಬಿರ ನಿರ್ದೇಶಕರಾಗಿ, ಯೋಜನಾಧಿಕಾರಿಯಾಗಿ, ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ಪಡೆದಿದ್ದರು. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಹಲವು ಕಡೆಗಳಲ್ಲಿ ಅಭಿನಂದನೆ, ಸನ್ಮಾನ ಪ್ರಶಸ್ತಿ ಈ ಮೊದಲು ಇವರಿಗೆ ಲಭಿಸಿತ್ತು.