ಕಾಸರಗೋಡು: ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ. ಕರ್ನಾಟಕ ವಿಜಯನಗರ ಹಾವಿನಗರ ಗಲ್ಲಿಯ ಶಂಕರ್ ನಾಯ್ಕ- ಕಮಲ ದಂಪತಿ ಪುತ್ರ ವಿನೋದ್ (38) ಸಾವನ್ನಪ್ಪಿದ ಕಾರ್ಮಿಕ. ಕಳೆದ ಜನವರಿ ೯ರಂದು ವಿದ್ಯಾನಗರ ಐಟಿಐ ರಸ್ತೆ ಬಳಿ ಹೊಸದಾಗಿ ನಿರ್ಮಿಸುತ್ತಿದ್ದ ಕಟ್ಟಡವೊಂದರ ಮೂರನೇ ಅಂತಸ್ತಿನಲ್ಲಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ವಿನೋದ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಮೊದಲು ಮಂಗಳೂರಿನ ಆಸ್ಪತ್ರೆಗೂ ನಂತರ ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾ ದರೂ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತರು ಹೆತ್ತವರ ಹೊರತಾಗಿ ಪತ್ನಿ ಸರೋಜಿನಿ, ಮಕ್ಕಳಾದ ಪ್ರೀತಮ್, ಪ್ರಣೀತ, ಶರತ್ ಕುಮಾರ್, ಸಹೋದರ ಸಹೋದರಿಯರಾದ ಜಗದೀಶ, ಸುಶೀಲ, ಮಂಜುಳ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.