ಕುಂಬಳೆ: ಅಪಾಯಕಾರಿಯಾದ ಕಂಚಿಕಟ್ಟೆ ಸೇತುವೆ ಮೂಲಕ ಘನ ವಾಹನಗಳು ಸಂಚರಿಸುವುದನ್ನು ತಡೆಯಲು ಸ್ಥಾಪಿಸಿದ ಗೋಡೆಯನ್ನು ಕೆಡವಿ ಹಾಕಿರುವುದು ನಂಬರ್ ಪ್ಲೇಟ್ ಇಲ್ಲದೆ ತಲುಪಿದ ಜೆಸಿಬಿಯಾಗಿದೆ ಎಂಬ ಸೂಚನೆಯಿದೆ. ಸೇತುವೆ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಸೇತುವೆ ಮೂಲಕ ಘನ ವಾಹನಗಳು ಸಂಚರಿಸದಂತೆ ತಡೆಯೊಡ್ಡಿದ್ದರು. ಇದರಂತೆ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ಪಂಚಾಯತ್ ಅಧಿಕಾರಿಗಳು ಕಾಂಕ್ರೀಟ್ ಗೋಡೆ ಸ್ಥಾಪಿಸಿದ್ದರು. ಒಂದೂವರೆ ವರ್ಷಗಳಿಂದ ಈ ಮೂಲಕ ವಾಹನ ಸಂಚಾರ ಮೊಟಕುಗೊಂಡಿತ್ತು. ಕಳೆದ ಶನಿವಾರ ರಾತ್ರಿ ಈ ಗೋಡೆಯನ್ನು ನಾಶಪಡಿಸಲಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸಿದಾಗ ಶನಿವಾರ ರಾತ್ರಿ ನಂಬರ್ ಪ್ಲೇಟ್ ಇಲ್ಲದ ಜೆಸಿಬಿ ಗೋಡೆಯನ್ನು ಕೆಡವಿ ಹಾಕಿರುವುದಾಗಿ ಸೂಚನೆ ಲಭಿಸಿದೆ. ಇದರ ಹಿಂದೆ ಹೊಯ್ಗೆ ಮಾಫಿಯಾಗಳ ಕೈವಾಡವಿರಬಹುದೆಂಬ ಸಂಶಯ ಹುಟ್ಟಿಕೊಂಡಿದೆ. ಈ ಕುರಿತಾಗಿಯೂ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಪಾಯಕಾರಿಯಾದ ಸೇತುವೆ ಮೂಲಕ ಘನ ವಾಹನಗಳು ಸಂಚರಿಸುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಈ ಸೇತುವೆಯನ್ನು ಮುರಿದು ತೆಗೆದು ಆಧುನಿಕ ರೀತಿಯಲ್ಲಿ ಸೇತುವೆ ನಿರ್ಮಿಸಲು ಸರಕಾರ ೨೭ ಕೋಟಿ ರೂ.ಗಳ ಯೋಜನೆ ಆವಿಷ್ಕರಿಸಿರು ವುದಾಗಿಯೂ ಹೇಳಲಾಗುತ್ತಿದೆ.