ಕಾಸರಗೋಡು: ಮೀನು ಹೇರಿಕೊಂಡು ಮಡಕ್ಕರದಿಂದ ಮಂಗಳೂರಿಗೆ ಹೋಗುತ್ತಿದ್ದ ಮಿನಿ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಅದರಲ್ಲಿದ್ದ ಮೀನುಗಳು ಹಾಗೂ ಮಲಿನಜಲ ರಸ್ತೆಗೆ ಚೆಲ್ಲಿ ದುರ್ನಾತ ವಾತಾವರಣ ಸೃಷ್ಟಿಯಾದ ಘಟನೆ ರಾಜ್ಯ ಹೆದ್ದಾರಿಯ ಮೇಲ್ಪರಂಬ ಮಸೀದಿ ಬಳಿ ನಿನ್ನೆ ನಡೆದಿದೆ. ಅಪಘಾತ ಬಳಿಕ ಲಾರಿಯಲ್ಲಿದ್ದವರು ರಸ್ತೆಯಿಂದ ಮೀನುಗಳನ್ನು ಹೆಕ್ಕಿ ಪೆಟ್ಟಿಗೆಗೆ ತುಂಬಿಸಿ ಬೇರೆ ಲಾರಿಯಲ್ಲಿ ಸಾಗಿಸಿದರೂ ರಸ್ತೆಯಲ್ಲಿ ಆವರಿಸಿದ ಮಲಿನಜಲವನ್ನು ತೆರವುಗೊಳಿಸಲಿಲ್ಲ. ಇದರಿಂದ ಆ ಪರಿಸರದಲ್ಲಿ ದುರ್ನಾತ ಸೃಷ್ಟಿಯಾಗಿದ್ದು, ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಪಿ. ಸನ್ನಿ ಇಮಾನುವಲ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿ ನೀರು ಹಾಯಿಸಿ ರಸ್ತೆಯನ್ನು ಶುಚಿಗೊಳಿಸಿದೆ. ಅಗ್ನಿಶಾಮಕದಳದ ಸಿಬ್ಬಂದಿಗಳಾದ ಒ.ಕೆ. ಪ್ರಜಿತ್, ಎಸ್. ಅರುಣ್ ಕುಮಾರ್, ಜೆ.ಬಿ. ಜಿಜೊ, ಎಂ.ಎ. ವೈಶಾಖ್, ಅರುಣ್ ಪಿ. ನಾಯರ್, ಎ. ರಾಜೇಂದ್ರನ್ ಶುಚೀಕರಣದಲ್ಲಿ ಪಾಲ್ಗೊಂಡರು.
